ತಿರುವನಂತಪುರಂ, ಅ.16: ಭಾರತೀಯ ಯಾತ್ರಾ ಸ್ಥಳಗಳಲ್ಲೊಂದಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ತಿಂಗಳ ಪೂಜೆ ಹಿನ್ನೆಲೆ ಇಂದಿನಿಂದ ಐದು ದಿನಗಳ ಕಾಲ ದೇವಾಲಯದ ದ್ವಾರ ತೆರೆದಿರುತ್ತದೆ. ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದೇವಾಲಯ ತೆರೆಯುತ್ತಿದ್ದು ಭಕ್ತರು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಕಾತರರಾಗಿದ್ದಾರೆ.
ಶಬರಿಮಲೆ ಅಯ್ಯಪ್ಪನ ದರ್ಶನದ ಮೇಲೆ ಕೊರೊನಾ ಕಾರ್ಮೋಡ ಕವಿದಿದ್ದು, ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿರುವಂತೆ ಒಂದು ದಿನ ಕೇವಲ 250 ಭಕ್ತರಿಗಷ್ಟೇ ದರ್ಶನ ಪಡೆಯುವ ಭಾಗ್ಯ ದೊರೆಯಲಿದೆ. ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ 24 ಗಂಟೆಯೊಳಗಿನ ಕೊರೊನಾ ವರದಿಯನ್ನಷ್ಟೇ ಪರಿಗಣಿಸಲಾಗುವುದೆಂದು ಸೂಚಿಸಿದೆ.
ಅನ್ಯ ರಾಜ್ಯದಿಂದ ಆಗಮಿಸುವ ಭಕ್ತಾದಿಗಳು ಕೊರೊನಾ ಪ್ರಮಾಣಪತ್ರ ತೆಗೆದುಕೊಂಡು ಬಂದಿದ್ದರೂ ಕೂಡ ನೀಲಕ್ಕಲ್ ಅಥವಾ ಪಂಪಾದಲ್ಲಿ ಮತ್ತೊಮ್ಮೆ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೂಡ ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಡಿದಾದ ಬೆಟ್ಟಗಳನ್ನು ಹತ್ತಬೇಕಿದೆ. ಮಾಸ್ಕ್ ಧರಿಸುವುದರಿಂದ ಭಕ್ತರು ಸುಸ್ತಾಗಿ ಉಸಿರಾಟದ ತೊಂದರೆ ಅನುಭವಿಸುವುದರ ಕಾರಣ ಸಮಸ್ಯೆಯಾಗಬಹುದು ಎಂದು ವೈದ್ಯಕೀಯ ಪರಿಣಿತರು ಹೇಳಿದ್ದರು. ಆದ್ದರಿಂದ ಮಾಸ್ಕ್ ಕಡ್ಡಾಯಗೊಳಿಸುವುದರ ಕುರಿತ ಗೊಂದಲ ಮುಂದುವರೆದಿದೆ. ಆದರೆ ಈ ಬಗ್ಗೆ ಇನ್ನು ನಿರ್ಧಾರ ಪ್ರಕಟವಾಗಿಲ್ಲ. ಇನ್ನು ಇಂದು ಸಂಜೆ ದೇವಾಲಯ ತೆರೆದರು ಭಕ್ತರಿಗೆ ಶನಿವಾರ ಮುಂಜಾನೆ ಐದು ಗಂಟೆಯಿಂದ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಯಾರಿಗೆ ಅವಕಾಶ, ನಿಯಮಗಳೇನು?
ನ.16ರಿಂದ ವಾರ್ಷಿಕ ಯಾತ್ರೆ ಆರಂಭವಾಗಲಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನದ ವಾರ್ಷಿಕ ಯಾತ್ರೆಯಿಂದ ಹಿರಿಯ ನಾಗರಿಕರು ಮತ್ತು 10 ವರ್ಷದ ಒಳಗಿನ ಮಕ್ಕಳು ಅವಕಾಶ ವಂಚಿತರಾಗುವುದು ಖಚಿತವೆನ್ನಲಾಗುತ್ತಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಅತ್ಯಂತ ವೇಗವಾಗಿ ಕೊರೊನಾ ಸೋಂಕು ತಗುಲುವುದರಿಂದ ಇವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.