ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತರು ಬೆಂಗಳೂರು ಫ್ರೇಜರ್ ಟೌನ್ ನಿವಾಸಿ ಇರ್ಫಾನ್ ನಾಸೀರ್ ಸತ್ತಾರ್ (33) ಮತ್ತು ತಮಿಳಿನಾಡಿನ ರಾಮನಾಥಪುರ ನಿವಾಸಿ ಅಹಮ್ಮದ್ ಅಬ್ದುಲ್ ಖಾದೆರ್(40) ಎಂದು ತಿಳಿದು ಬಂದಿದೆ. ಇವರನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನಗಳ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಇರ್ಫಾನ್, ಅಕ್ಕಿ ವ್ಯಾಪಾರಿಯಾಗಿದ್ದು, ಅಬ್ದುಲ್ ಖಾದೆರ್, ಚೆನ್ನೈನ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ. ನಗರದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಬ್ದುಲ್ ರಹಮಾನ್ ಎಂಬಾತನನ್ನು ಬಸವನಗುಡಿಯಲ್ಲಿ ಎನ್ಐಎ ಬಂಧಿಸಿತ್ತು. ಆತ ನೀಡಿದ್ದ ಮಾಹಿತಿಯಂತೆ ಗುರಪ್ಪನಪಾಳ್ಯ ಹಾಗೂ ಫ್ರೇಜರ್ಟೌನ್ನಲ್ಲಿ ಕಾರ್ಯಾಚರಣೆ ನಡೆಸಿದ ಎನ್ಐಎ ಅಧಿಕಾರಿಗಳು, ಇಬ್ಬರೂ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಬಂಧಿತರು 2013-14ರಲ್ಲಿ ಸಿರಿಯಾಗೆ ಹೋಗಿ ಬಂದಿದ್ದು ‘ಕುರಾನ್ ಸರ್ಕಲ್’ ಎಂಬ ಗುಂಪು ಕಟ್ಟಿಕೊಂಡಿದ್ದರು. ಅದರ ಮೂಲಕವೇ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ ಎನ್ನಲಾಗಿದೆ.