ಕೋವಿಡ್ ಪರೀಕ್ಷೆ ವೇಳೆ ಮಾಹಿತಿಗಾಗಿ ತನ್ನ ಫೋನ್ ನಂಬರ್ ಬದಲು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೋವಿಡ್ ಸೋಂಕಿತನೊಬ್ಬ ಅಧಿಕಾರಿಗಳನ್ನು ಯಾಮಾರಿಸಿದ ಘಟನೆ ನಗರದಲ್ಲಿ ನಡೆದಿದೆ.
ಹೆಬ್ಬಾಳ್ನ ನಿವಾಸಿಯೊಬ್ಬ ಮೂಗು ಮತ್ತು ಗಂಟಲು ದ್ರವ ಸಂಗ್ರಹ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ವ್ಯಕ್ತಿಯ ವಿಳಾಸ, ಮೊಬೈಲ್ ನಂಬರ್ ಇನ್ನಿತರೆ ಮಾಹಿತಿ ಕಲೆಹಾಕುವ ವೇಳೆ ತನ್ನ ನಂಬರ್ ಬದಲಿಗೆ ಜಿಲ್ಲಾಧಿಕಾರಿ ನಂಬರ್ ಕೊಟ್ಟಿದ್ದಾನೆ. ಈತನ ಪರೀಕ್ಷೆ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದ ಅಧಿಕಾರಿಗಳ ಫೋನ್ ಕರೆ ಮಾಡಿ ಸಂಪರ್ಕಿಸಿದ್ದಾರೆ. ಜಿಲ್ಲಾಧಿಕಾರಿಗಳು ಮಾತನಾಡಿದ ನಂತರವೇ ಅಧಿಕಾರಿಗಳಿಗೆ ನಿಜಾಂಶ ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ. ಆತ ಜಿಲ್ಲಾಧಿಕಾರಿ ನಂಬರ್ ಕೊಟ್ಟಿದ್ದಾನೆ.
ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಪ್ರತಿಕ್ರಿಯಿಸಿ, ಕಂಟ್ರೋಲ್ ರೂಂ ನಿಂದ ಕರೆ ಮಾಡಿ ʻಸರ್ ನಿಮಗೆ ಕೋವಿಡ್ ಪಾಸಿಟಿವ್ ಬಂದಿದೆ.. ಕ್ವಾರಂಟೈನ್ಗೆ ಒಳಗಾಗಿʼ ಎಂದು ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯ ಆಯಿತು. ನಾನು ಜಿಲ್ಲಾಧಿಕಾರಿ ಮಾತನಾಡುತ್ತಿರುವುದು ಎಂದು ನಂತರ ಅಧಿಕಾರಿಗೆ ತಿಳಿಸಿದೆ. ಮಾಹಿತಿ ಸಂಗ್ರಹಿಸುವ ವೇಳೆ ಆ ವ್ಯಕ್ತಿ ನನ್ನ ನಂಬರ್ ಕೊಟ್ಟಿರುವುದಾಗಿ ಅಧಿಕಾರಿ ತಿಳಿಸಿದರು.
ಕ್ವಾರಂಟೈನ್ಗೆ ಒಳಗಾಗುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಕೆಲವರು ಏನೆಲ್ಲ ದಾರಿತಪ್ಪಿಸುವ ಕೆಲಸ ಮಾಡುತ್ತಾರೆ ಎಂಬುದನ್ನು ಅರಿತು ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಜೊತೆಗೆ ನಗು ಬಂತುʼ ಎಂದು ಹೇಳಿದ್ದಾರೆ.
ʻಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಸಹಕರಿಸಬೇಕು, ಸೂಕ್ತ ಮಾಹಿತಿ ನೀಡಬೇಕುʼ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ʻಒಂದು ವೇಳೆ ಸಂಪರ್ಕಿಸುವ ಮಾಹಿತಿ ತಪ್ಪಿದ್ದರೆ ಕೊರೊನಾ ಸೋಂಕಿತರು ಮತ್ತು ಅವರ ಪ್ರಾಥಮಿಕ, ಸೆಕೆಂಡರಿ ಸಂಪರ್ಕದಲ್ಲಿದ್ದವರನ್ನು ಗುರುತಿಸುವುದು ತುಂಬಾ ಕಷ್ಟ. ದಾರಿ ತಪ್ಪಿಸುವ ಕೆಲಸ ಬಿಟ್ಟು ಕೋವಿಡ್ ಸಾಂಕ್ರಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ಜನತೆಯ ಸಹಕಾರ ಅಗತ್ಯʼ ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.