ಹುಬ್ಬಳ್ಳಿ, ನ. 05: ಕೊರೊನಾದಿಂದ ಬೇಸತ್ತ ಜನರು ಮುಂಬರುವ ದೀಪಾವಳಿಯನ್ನು ಸಂಭ್ರಮಿಸಲು ಕಾತುರರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮೇಲಿನ ದರ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗೆಯೇ ಜನರನ್ನು ಕಂಗಾಲಾಗಿಸಿದೆ. ಅದರಲ್ಲೂ ತರಕಾರಿ, ಬೇಳೆ ಕಾಳುಗಳ ಬೆಲೆ ದುಬಾರಿಯಾಗಿದ್ದು, ದೀಪಾವಳಿ ಹೊಸ್ತಿಲಲ್ಲಿ ಎದುರಾದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ತತ್ತರಿಸುವಂತೆ ಮಾಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಬೆಂಗಳೂರು, ಗೋವಾ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೂ ತರಕಾರಿ ಉತ್ತರ ಕರ್ನಾಟಕ ಭಾಗದಿಂದ ಸರಬರಾಜಾಗುತ್ತದೆ. ಈರುಳ್ಳಿ, ಮೆಣಸಿನಕಾಯಿ, ಜೋಳ, ಕಡಲೆ, ಹೆಸರು ದೇಶಾದ್ಯಂತ ರಫ್ತಾಗುತ್ತದೆ. ಆದರೆ ಅತಿವೃಷ್ಟಿಯ ಹೊಡೆತ ಉತ್ತರ ಕರ್ನಾಟಕವನ್ನು ಕಂಗೆಡಿಸಿದೆ.
ಪ್ರವಾಹದಿಂದ ತರಕಾರಿ ಸೇರಿದಂತೆ ಇನ್ನಿತರ ಬೆಳೆ ನೀರು ಪಾಲಾಗಿದೆ. ಪರಿಣಾಮ ತರಕಾರಿ, ಆಹಾರ ಧಾನ್ಯಗಳ ಕೊರತೆ ಸೃಷ್ಟಿಯಾಗಿ, ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಸ್ಥಳೀಯರ ಮೇಲೂ ಆಗುತ್ತಿದೆ. ಅದರಲ್ಲೂ ಹಬ್ಬದ ಊಟಕ್ಕೆ ತರಹೇವಾರಿ ತರಕಾರಿ ಇಲ್ಲದೇ ಊಟ ರುಚಿಸದು. ಹಾಗಂತ ಮಾರುಕಟ್ಟೆಗೆ ತರಕಾರಿ ಕೊಳ್ಳಲು ಹೋದರೆ ನೂರಿನ್ನೂರರ ನೋಟು ಯಾವುದಕ್ಕೂ ಸಾಲದು.
ಈರುಳ್ಳಿ ಬೆಲೆ ಕೆಜಿಗೆ 80ರಿಂದ 100 ರೂಪಾಯಿ ಗಡಿಯಲ್ಲಿಯೇ ಇದೆ. ಆಲೂಗಡ್ಡೆ ಕೆಜಿಗೆ 50 ರಿಂದ 70 ರೂಪಾಯಿ. ಬೆಂಡೆಕಾಯಿ, ಚವಳಿಕಾಯಿ, ಹಾಗಲಕಾಯಿ, ಬದನೆಕಾಯಿ ಕೆಜಿಗೆ 80ರಿಂದ 100 ರೂಪಾಯಿಯಾದರೆ, ಬೀನ್ಸ್, ಬಟಾಣಿ, ಕ್ಯಾರೆಟ್ ಕೆಜಿಗೆ 100 ರೂಪಾಯಿ ಗಡಿ ದಾಟಿವೆ. ಹಸಿ ಶುಂಠಿ 200 ರೂಪಾಯಿಗೆ ಕೆಜಿಯಾಗಿದ್ದರೆ, ಬೆಳ್ಳುಳ್ಳಿ 180ರಿಂದ 200 ರೂಪಾಯಿಯಾಗಿದೆ. ತೆಂಗಿನಕಾಯಿ ಬೆಲೆಯೂ ದಿಢೀರನೆ ಏರಿಕೆ ಕಂಡಿರುವುದರ ಜತೆಗೆ ಬೇಳೆ ಕಾಳುಗಳ ಬೆಲೆಯೂ ಗಗನಕ್ಕೇರಿದೆ. ತೊಗರಿ ಬೇಳೆ 150ರಿಂದ 170ರೂಪಾಯಿ. ಸೂರ್ಯಕಾಂತಿ ಎಣ್ಣೆಯಂತೂ ಒಂದೇ ವಾರದಲ್ಲಿ ಲೀಟರ್ಗೆ 25 ರೂಪಾಯಿ ಹೆಚ್ಚಳವಾಗಿದೆ. ಪಾಮ್ ಎಣ್ಣೆ ಬೆಲೆಯೂ 15ರೂಪಾಯಿ ಏರಿಕೆ ಕಂಡಿದೆ.
ಒಟ್ಟಾರೆ ಒಂದೆಡೆ ಕೊರೊನಾ, ಮತ್ತೊಂದಡೆ ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಭಾರೀ ಮಳೆ ಜನರನ್ನು ಹೈರಾಣಾಗಿಸಿದೆ. ಇದರ ಮಧ್ಯೆ ಬೆಲೆ ಏರಿಕೆ ಬಿಸಿ ಜೋರಾಗಿಯೇ ತಟ್ಟಿದೆ.