ಬೆಂಗಳೂರು, ನ. 13: ಹೃದಯ ವಿದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ತನ್ನ ಮೂರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘೋರ ಕೃತ್ಯ ನಡೆದಿರುವುದು ಬೆಂಗಳೂರಿನ ಮೈಕೋ ಲೇಔಟ್ನ ರಮಣಶ್ರೀ ಎನ್ ಕ್ಲೇವ್ನಲ್ಲಿ. ಈ ಅಪಾರ್ಟಮೆಂಟ್ನ ಸೆಕ್ಯುರಿಟಿ ಗಾರ್ಡ್ ಆಗಿದ್ದ ಜನಕರಾಜ್ ಬಿಸ್ತಾ (32) ಈ ಕೃತ್ಯ ಎಸಗಿದ ಅಪರಾಧಿ.
ಬೆಳಿಗ್ಗೆಯಿಂದ ಹೊರಗಡೆ ಎಲ್ಲಾ ಓಡಾಡಿದ ಜನಕರಾಜ್ 11.30 ರ ಸುಮಾರಿಗೆ ತನ್ನ ಮೂವರು ಮಕ್ಕಳಾದ ಸರಸ್ವತಿ (14) ಹೇಮಾವತಿ(9) ಹಾಗೂ ರಾಜ್ ಕುಮಾರ್ (3) ರನ್ನು ನೇಣಿಗೆ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲ್ವರ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೈಕೋ ಲೇಔಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನದಲ್ಲಿ ಜಿಗುಪ್ಸೆ ಬಂದು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಎರಡು ತಿಂಗಳ ಹಿಂದೆ ಜನಕರಾಜ್ ಪತ್ನಿ ನಂದಾದೇವಿಯೂ ಆತ್ಮಹತ್ಯೆಗೆ ಶರಣಾಗಿದ್ದಳು. ಮಕ್ಕಳನ್ನು ನೋಡಿಕೊಳ್ಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಜನಕರಾಜ್ ಮಕ್ಕಳನ್ನು ನೇಣಿಗೆ ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.