ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಾ ಅಥವಾ ವಿಜಯೇಂದ್ರನಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ವಿಜಯೇಂದ್ರ ಸರ್ಕಾರ ವೈದ್ಯರ ಜೊತೆ ಸಭೆ ನಡೆಸಿರುವುದನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಆರೋಗ್ಯ ಮಂತ್ರಿ ಶ್ರೀರಾಮುಲು ತನ್ನ ಕೈಯಲ್ಲಿ ಆರೋಗ್ಯ ಇಲಾಖೆಯನ್ನು ನಿಭಾಯಿಸೋಕೆ ಆಗ್ತಿಲ್ಲ, ಸ್ವಲ್ಪ ಸಹಾಯ ಮಾಡಿ ಅಂತ ಕೇಳಿರಬಹುದು.
ಇಲ್ಲದಿದ್ದರೆ ಸಂವಿಧಾನಾತ್ಮಕ ಹುದ್ದೆಯೇ ಇಲ್ಲದ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳ ಸಭೆ ನಡೆಸೋಕೆ ಹೇಗೆ ಸಾಧ್ಯ? ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಾ? ಅಥವಾ ವಿಜಯೇಂದ್ರನಾ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ.
ಮೋದಿ ಆಡಳಿತದ ನಿರುದ್ಯೋಗ ಪರ್ವ ಮುಂದುವರಿಕೆ: ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಕಳೆದ 45 ವರ್ಷಗಳಲ್ಲಿ ಅತ್ಯಧಿಕ ನಿರುದ್ಯೋಗಕ್ಕೆ ಕಾರಣಕರ್ತರಾಗಿದ್ದಾರೆ.
ಇದರ ವಿರುದ್ಧ ಸಿಡಿದೆದ್ದಿರುವ ದೇಶದ ಯುವಜನತೆ ಪ್ರಾರಂಭಿಸಿರುವ ಅಭಿಯಾನವನ್ನು ನಾನು ಬೆಂಬಲಿಸುತ್ತೇನೆ. ಮೋದಿ ಅವರ ಆಡಳಿತದ ನಿರುದ್ಯೋಗ ಪರ್ವ ನಿರಾಂತಕವಾಗಿ ಮುಂದುವರಿದಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕಳೆದ 6 ತಿಂಗಳಲ್ಲಿ ಸಂಬಳ ಪಡೆಯುವ ಎರಡು ಕೋಟಿ ಉದ್ಯೋಗಗಳು ಮತ್ತು ಒಟ್ಟು 12 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಉದ್ಯೋಗ ಸೃಷ್ಟಿಗೆ ನಿಮ್ಮ ಯೋಚನೆ ಮತ್ತು ಯೋಜನೆ ಏನು? ದೇಶದ ಯುವಜನ ಕೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿ, ಈಗ ಇರುವ ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದರಿಂದ ನೊಂದಿರುವ ಉದ್ಯೋಗವಂಚಿತ ಯುವಜನತೆ ಈ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಧೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಈ ವೇಳೆ ಹಾರೈಸುತ್ತೇನೆ. ಮೋದಿಯವರ ಜನ್ಮದಿನದ ಆಚರಣೆಯನ್ನು ಯಾರೂ ಬೇಡ ಅಂದಿಲ್ಲ, ಆದರೆ ಕೋಟ್ಯಂತರ ರೂಪಾಯಿ ಸುರಿದು ಜಾಹೀರಾತು ನೀಡಿ ಮಾಡದೇ ಇರುವ ಕೆಲಸಗಳನ್ನೆಲ್ಲಾ ಮೋದಿಯ ಸಾಧನೆ ಎಂದು ಸುಳ್ಳು ಪ್ರಚಾರ ಪಡೆಯುತ್ತಿರುವುದಕ್ಕಷ್ಟೇ ನಮ್ಮ ವಿರೋಧ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಸಾಧನೆಗಳೆಂದರೆ, ಭಾರತದ ಜಿಡಿಪಿಯನ್ನು ಶೇ. 23ಕ್ಕೆ ಕೊಂಡೊಯ್ದಿರುವುದು, ನಿರುದ್ಯೋಗ ಪ್ರಮಾಣವನ್ನು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿಸಿರುವುದು, ಪೆಟ್ರೋಲ್ ಡೀಸೆಲ್ ಬೆಲೆ ನೂರರ ಆಸುಪಾಸಿಗೆ ತಂದು ನಿಲ್ಲಿಸಿರುವುದು ಎಂದು ಕುಟುಕಿದ್ದಾರೆ.
ದೇಶದ ಯುವಜನತೆ ಪ್ರಧಾನಿ ಮೋದಿ ಅವರಲ್ಲಿ ಭರವಸೆ ಇಟ್ಟು ಮತ ನೀಡಿದ್ದರು, ಇಂದು ಅದೇ ಯುವಜನಾಂಗ ಉದ್ಯೋಗವಿಲ್ಲದೆ ಖಿನ್ನತೆ ಅನುಭವಿಸುತ್ತಿದೆ. ಕೃಷಿ ಕ್ಷೇತ್ರವೊಂದನ್ನು ಹೊರತುಪಡಿಸಿ ದೇಶದ ಉಳಿದೆಲ್ಲಾ ವಲಯಗಳ ಪ್ರಗತಿ ಋಣಾತ್ಮಕವಾಗಿದೆ. ಇದರಿಂದ ರಾಷ್ಟ್ರದ ಭವಿಷ್ಯಕ್ಕೆ ಅಂಧಕಾರ ಆವರಿಸಿದೆ.
ಮಾರ್ಚ್ನಲ್ಲಿ 564 ಇದ್ದ ದೇಶದ ಕೊರೊನಾ ಸೋಂಕಿತರ ಪ್ರಮಾಣವನ್ನು ಕೇವಲ ಆರೇ ತಿಂಗಳಲ್ಲಿ 51 ಲಕ್ಷಕ್ಕೆ ಮುಟ್ಟಿಸಿರುವುದೇ ಮೋದಿ ಅವರ ಮಹತ್ತರ ಸಾಧನೆ. ಭಾರತವನ್ನು ವಿಶ್ವಗುರು ಮಾಡ್ತೀನಿ ಅಂತ ಹೇಳಿ, ಈಗ ಕೊರೊನಾದಲ್ಲಿ ನಂ.1 ಮಾಡಲು ಹೊರಟಿದ್ದಾರೆ. ಸದ್ಯ ಸೋಂಕಿತರ ಏರಿಕೆ ಪ್ರಮಾಣದಲ್ಲಿ ಭಾರತವೇ ಮುಂದಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.