ಹೆಣ್ಣು ಮನಸ್ಸು ಮಾಡಿದ್ರೆ ಸಮಾಜವನ್ನೇ ಬದಲಾಯಿಸಬಹುದು ಅನ್ನೋದಕ್ಕೆ ಬೆಂಗಳೂರಿನ ಇಂದಿರಾ ಟೀಚರೇ ಸಾಕ್ಷಿ. ಇಂದಿರಾ ಟೀಚರ್ ಬೆಂಗಳೂರು ದಕ್ಷಿಣ ತಾಲೂಕಿನ ಓ.ಬಿ. ಚೂಡನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ. ಇವರು ಈ ಶಾಲೆಗೆ ಕಾಲಿಟ್ಟ ದಿನದಿಂದ ಈ ಶಾಲೆ ಅಭಿವೃದ್ಧಿಯನ್ನೇ ಕಾಣುತ್ತಿದೆ. ರಾಜ್ಯ ಅಲ್ಲ ರಾಷ್ಟ್ರಮಟ್ಟದಲ್ಲೂ ಮಿಂಚುತ್ತಿದೆ.
ಈ ಶಾಲೆ ಸುಮಾರು ವರ್ಷಗಳ ಹಿಂದೆ, ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು. ಯಾವುದೇ ಸೌಕರ್ಯಗಳಿರದ ತೀರಾ ಕೆಳಮಟ್ಟದಲ್ಲಿತ್ತು. ಗೇಟಿನಿಂದ ಹಿಡಿದು ಶಾಲೆಯೊಳಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲದೆ ಮೂಲೆಗುಂಪಾಗಿತ್ತು. ವಿದ್ಯಾರ್ಥಿಗಳು ಇಲ್ಲದೆ ಮುಚ್ಚುವ ಹಂತ ತಲುಪಿತ್ತು.ಇಂತಹ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯಾಗಿ ಇಂದಿರಾ ಅವರು ಶಾಲೆಗೆ ಬಂದು ಅದ್ಭುತವನ್ನೇ ಸಾಧಿಸಿದ್ರು.
ಮುಖ್ಯೋಪಾದ್ಯಾಯಿನಿಯಾಗಿ ಇಂದಿರಾರವರು ಬಂದ ನಂತರ ಗ್ರಾಮ ಪಂಚಾಯತ್ ನ ಬೆಂಬಲದಿಂದ ಹಂತ ಹಂತವಾಗಿ ಶಾಲೆಯ ರೂಪು ರೇಷೆಗಳನ್ನು ಬದಲಾಯಿಸಿ ಬಿಟ್ಟಿದ್ದಾರೆ. ಪೋಷಕರು, ಗ್ರಾಮಸ್ಥರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪಂಚಾಯತ್ ಮುಖ್ಯಸ್ಥರು ಜನಪ್ರತಿನಿಧಿಗಳು ಮುಂತಾದವರೊಂದಿಗೆ ಮಾತಾಡಿ ಶಾಲೆಗೆ ನೀರಿನ ವ್ಯವಸ್ಥೆ, ಮತ್ತು ಕಂಪ್ಯೂಟರ್ ಕಟ್ಟಡಕ್ಕಾಗಿ ಪಂಚಾಯತಿಯಿಂದ 7 ಲಕ್ಷ ರೂ ಅನುದಾನವನ್ನು ಸತತ ಪ್ರಯತ್ನದಿಂದ ಪಡೆದುಕೊಂಡರು. ಅಂಗನವಾಡಿ ಕೇಂದ್ರ, ಶಾಲೆಗೆ ಪೈಂಟಿಂಗ್, ಗೇಟ್ , ಶೌಚಾಲಯ ಮುಂತಾದ ಸೌಲಭ್ಯಗಳೊಂದಿಗೆ ಖಾಸಗಿ ಶಾಲೆಗಳಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದಂತೆ ಈ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.
ಪಾಠ ಪ್ರವಚನದ ಜೊತೆ ಯೋಗ, ಭಗವದ್ಗೀತೆ ಪಠಣ ಮತ್ತು ಹಾಡು ನೃತ್ಯ ಮುಂತಾದ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳಿಂದ ಮಕ್ಕಳ ಜ್ಞಾನಾರ್ಜನೆಗಳನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತಿದ್ದಾರೆ. ಸ್ವಚ್ಚ ಭಾರತದಡಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಮಹತ್ವ ನೀಡಿದ್ದಾರೆ. ಶಾಲೆಯ ಅಂದಕ್ಕಾಗಿ ಸುರಕ್ಷತೆಗಾಗಿ ಸಣ್ಣ ಬಣ್ಣವನ್ನು ಕೊಟ್ಟು ಸ್ವಚ್ಛತೆಯಿಂದ ಇರಿಸಿಕೊಂಡಿದ್ದಾರೆ.
ಶಾಲೆಗೆ ಮೀಸಲಾಗಿದ್ದ ಜಾಗವನ್ನು ಅಕ್ರಮ ಮಾಡಲು ಬಂದವರಿಂದ ಅದನ್ನು ರಕ್ಷಿಸಿ ಶಾಲೆಗೆ ಆ ಜಾಗವನ್ನು ಪಡೆದುಕೊಂಡಿದ್ದಾರೆ. ಈ ಶಾಲೆಯಲ್ಲಿ ಸುಮಾರು 7 ಜನ ಶಿಕ್ಷಕರಿದ್ದಾರೆ, 160 ಮಕ್ಕಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮಕ್ಕಳು ಶಿಸ್ತಿನಲ್ಲಿ ಸಮವಸ್ತ್ರವನ್ನು ತಪ್ಪದೆ ಧರಿಸುತ್ತಾರೆ ಶೈಕ್ಷಣಿಕವಾಗಿ ನಿರಂತರ ಶಿಕ್ಷಣ ಕಾರ್ಯಕ್ರಮವೂ ಇಲ್ಲಿ ನಡೆಯುತ್ತಿದೆ. ಒಟ್ಟಾರೆ ಇವರು ಮಾದರಿ ಶಿಕ್ಷಕಿ ಎನಿಸಿಕೊಂಡಿದ್ದಾರೆ.
ಇಂದಿರಾ ಟೀಚರ್ ಅನೇಕ ಪ್ರಶಸ್ಥಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಮುರಿದು ಬಿದ್ದ ದ್ವಜಸ್ಥಂಭವನ್ನು ಸರಿಪಡಿಸಿದ್ದಾರೆ. ಸೋರುತ್ತಿದ್ದ ಮಾಡಿನ ದುರಸ್ಥಿತಿಯನ್ನು ಮಾಡಿದ್ದಾರೆ. ಇನ್ನೂ ಕೆಲವು ಆಸೆಯನ್ನು ಹೊಂದಿದ್ದಾರೆ. ಸುಸಜ್ಜಿತವಾದ ಲೈಬ್ರೆರಿ ಬೇಕು, ಸಿಸಿಟಿವಿ ಬೇಕು ಹಾಗೂ ವಿಜ್ಞಾನದ ಉಪಕರಣಗಳನ್ನು ಅಳವಡಿಸಬೇಕು ಎಂಬುದು ಇವರ ಮಹದಾಸೆಯಾಗಿದೆ.
ಹಾಗೂ ಶಾಲಾ ಕೊಠಡಿಗಳಿಗೆ ಬಾಗಿಲುಗಳನ್ನು ಮಾಡಿಸಿದ್ದಾರೆ. ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ರಸ್ತೆಯ ದುರಸ್ಥಿತಿಯನ್ನು ಮಾಡಿದ್ದಾರೆ. ಕೊರೋನಾ ಸಮಯದಲ್ಲೂ ಇವರು ಒಬ್ಬರೇ ಬಂದು ಶಾಲಾಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ ಶಾಲೆಯನ್ನು ಮನೆಯಂತೆ ಪರಿವರ್ತಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
ತಾವು ನಿವೃತ್ತರಾಗುವ ಮೊದಲು ಶಾಲೆಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂಬುದು ಇವರ ಆಶಯವಾಗಿದೆ. ಇಂದಿರಾ ರವರ ಸಾಧನೆಯ ಹಾದಿಯಲ್ಲಿರುವ ಎಲ್ಲಾ ಆಸೆಗಳು ಈಡೇರಲಿ ಇನ್ನಷ್ಟು ಉತ್ತಮ ಕೆಲಸಗಳು ಪ್ರಗತಿಪರ ಕಾರ್ಯಗಳು ಹೀಗೆ ಮುಂದುವರಿಯಲಿ ಇವರ ಸಾಧನೆ ಇತರರಿಗೆ ಮಾರ್ಗದರ್ಶಿಯಾಗಲಿ ಇಂದಿರಾ ಟೀಚರ್ ಗೆ ಒಳ್ಳೆಯದಾಗಲಿ ಎಂಬುದು ವಿಜಯಾಟೈಮ್ಸ್ ಆಶಯವಾಗಿದೆ.