ವಾಷಿಂಗ್ಟನ್: ಭಾರೀ ಭರವಸೆ ಮೂಡಿಸಿದ್ದ ಆಕ್ಸ್ಫರ್ಡ್ ವಿವಿ ಸಂಶೋಧಕರ ಕೋವಿಡ್ ಲಸಿಕೆ ಪಡೆದ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೆ ಗುರಿಯಾಗಿದ್ದು, ಇದರಿಂದಾಗಿ ಇನ್ನೇನು ಲಸಿಕೆ ಕೈಗೆ ಬಂತು ಎನ್ನುವ ನಂಬಿಕೆ ಹುಸಿಯಾಗಿದೆ.
ಈ ಪ್ರಕರಣದಿಂದಾಗಿ ಆಸ್ಟ್ರಾಜೆನಕಾ ಕೋವಿಡ್ ಲಸಿಕೆ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ಡೇಟಾಗಳ ಪರಿಶೀಲನೆ ನಡೆಸಿ ಮತ್ತೆ ಚಾಲನೆ ನೀಡಲಾಗುವುದು ಎಂದು ಸಂಶೋಧಕರ ತಂಡ ತಿಳಿಸಿದೆ.
ಮೊದಲ ಹಾಗೂ ಎರಡನೇ ಪರೀಕ್ಷೆ ನಡೆಸಿದಾಗ ಆಸ್ಟ್ರಾಜೆನಕಾ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದವರ ಮೇಲೆ ಅಂತಹ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿರಲಿಲ್ಲ. ಆದರೆ ಮೂರನೇ ಪ್ರಯೋಗಕ್ಕೆ 30 ಸಾವಿರ ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಈ ಪ್ರಕರಣದಿಂದಾಗಿ ಆತಂಕ ಎದುರಾಗಿದೆ.
ಪುಣೆ ಮೂಲದ ಸಿರಂ ಔಷಧ ಸಂಸ್ಥೆಯು ಆಸ್ಟ್ರಾಜೆನಕಾ ಲಸಿಕೆಯನ್ನು ಭಾರತದಲ್ಲಿ ಪ್ರಯೋಗ ನಡೆಸಲು ಅನುಮತಿ ಪಡೆದಿತ್ತು. ಭಾರತದ 5 ಸ್ಥಳಗಳಲ್ಲಿ ಈ ಲಸಿಕೆಯ ಪ್ರಯೋಗ ನಡೆಯುತ್ತಿದೆ.