ದುಬೈ ಸೆ 22 : ದುಬೈನಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯಾರ್ಧಕ್ಕೆ ಮತ್ತೆ ಕೊರೊನಾ ವಕ್ಕರಿಸಿದ್ದು ಇದೀಗ ಐಪಿಎಲ್ ಟೂರ್ನಿಯು ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಬುಧವಾರ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ನಡೆಯುವ ಕೆಲವೇ ಗಂಟೆಗಳ ಮೊದಲು ಸನ್ರೈಸರ್ಸ್ ತಂಡದ ವೇಗದ ಬೌಲರ್ ನಟರಾಜನ್ ಅವರಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇದರೊಂದಿಗೆ ಅವರ ಸಂಪರ್ಕಕ್ಕೆ ಬಂದ ಇತರ ಆರು ಆಟಗಾರರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ತಂಡದ ಒಬ್ಬ ಆಟಗಾರ (ಟಿ ನಟರಾಜನ್) ಸೋಂಕಿಗೆ ತುತ್ತಾಗಿರುವುದು ಖಾತ್ರಿಯಾಗಿದೆ. ಈ ನಡುವೆ ಅವರ ಸಂಪರ್ಕದಲ್ಲಿ ಇದ್ದ ಆಟಗಾರರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಐಸೊಲೇಷನ್ಗೆ ಒಳಪಡಿಸಲಾಗಿದೆ. ಉಳಿದ ಆಟಗಾರರನ್ನು ಆರ್ಟಿಪಿಸಿಆರ್ ಟೆಸ್ಟ್ಗೆ ಒಳಪಡಿಸಿ ಫಲಿತಾಂಶ ಬಂದ ಬಳಿಕವಷ್ಟೇ ಪಂದ್ಯ ನಡೆಯುತ್ತದೋ ಇಲ್ಲವೋ ಎಂಬುದು ಖಚಿತವಾಗುವುದಿದೆ. ಸದ್ಯ ನಟರಾಜನ್ ಸಂಪರ್ಕಕ್ಕೆ ಬಂದಿದ್ದ ಆಟಗಾರ ವಿಜಯ್ ಶಂಕರ್, ತಂಡದ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್, ತಂಡದ ವೈದ್ಯೆ ಅಂಜನಾ ವನ್ನನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಎಂದು ಗುರುತಿಸಲಾಗಿದೆ.