ಹಾವೇರಿ,ಸೆ.19: ಕೋಡಿಮಠ ಸ್ವಾಮೀಜಿ ಮತ್ತೆ ಸುದ್ದಿಯಲ್ಲಿದ್ದಾರೆ..ರಾಜಕೀಯದ ಮುಂದಿನ ದಿನಗಳ ಬಗ್ಗೆ ಆಗಾಗ ಭವಿಷ್ಯವಾಣಿ ನುಡಿಯುತ್ತಿರುವ ಕೋಡಿಮಠಾಧೀಶರು ಸದ್ಯ ರಾಜ್ಯ ಸರ್ಕಾರದ ಬಗ್ಗೆ ಬಾಂಬ್ ಸಿಡಿಸಿದ್ದಾರೆ. “ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯವಿಲ್ಲ” ಎಂದು ಭವಿಷ್ಯ ನುಡಿದಿದ್ದ ಅವರು, ಸದ್ಯ “ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತ” ಎಂದು ಹೇಳುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಸದ್ಯ ಹದಿನಾಲ್ಕು, ಹದಿನೈದು ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ, ಬಿತ್ತಿದ ಬೆಳೆ ಪೈರು ಕೊಯ್ದಾರು, ಬೆಳೆವೊಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳುತ್ತಾರೆ ಎಂದು ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. ಈ ಹೇಳಿಕೆ ಚುನಾವಣೆ ಪೂರ್ವದಲ್ಲಿ ನುಡಿದಿದ್ದೆ. ಇದೀಗ ಮೈತ್ರಿ ಸಕರಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ, ಕಾದು ನೋಡಿ ಎನ್ನುವ ಮೂಲಕ ಸರಕಾರ ಪತನವಾಗುತ್ತೆ ಎಂದು ಪರೋಕ್ಷವಾಗಿ ನುಡಿದರು.
ನೆರೆಯ ಬಗ್ಗೆ ಭವಿಷ್ಯ ನುಡಿದಿದ್ದ ಶ್ರೀಗಳು ರಾಜ್ಯದಲ್ಲಿ ಈಗಾಗಲೇ ಪ್ರವಾಹ ಬಂದು ಹಲವು ರೀತಿಯ ಅನಾಹುತವನ್ನು ಜನರು ಎದುರಿಸಿದ್ದಾರೆ. ಇನ್ನೂ ಪ್ರವಾಹದ ಲಕ್ಷಣ ಕಾರ್ತಿಕ ಕಳೆಯುವವರೆಗೂ ಇರಲಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು.
ಇನ್ನೂ ಭಾರತದ ಮೇಲೆ ಪಾಕ್ ಯುದ್ಧೋನ್ಮಾದ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ದಾಯಾದಿಗಳ ಕಲಹ ಮೊದಲಿನಿಂದಲೂ ಬಂದಿದೆ ಇದು ಅದರಂತೆ ಎಂದು ಹೇಳಿದರು.