ಬೆಂಗಳೂರು: ಜ. 14: ದಿನದಿಂದ ದಿನಕ್ಕೆ ಕೋವಿಡ್ (Covid -19) ಮಹಾಮಾರಿಯ ಆತಂಕ ಹೆಚ್ಚುತ್ತಿದೆ. ಅದ್ರಲ್ಲೂ ಕೋವಿಡ್ 19 ರೂಪಾಂತರಿ ಒಮಿಕ್ರಾನ್ ವೈರಸ್ ಅತೀ ವೇಗವಾಗಿ ಹಬ್ಬುತ್ತಿರುವುದರಿಂದ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ರೂ ಅದನ್ನು ಧಿಕ್ಕರಿಸಿ ಕಾಂಗ್ರೆಸ್ (Congress) ನಾಯಕರು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದರು. ಈ ನಡುವೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅನೇಕರು ಕೊರೋನಾ ಸೋಂಕಿತರಾಗಿದ್ದರು. ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ಗೆ ಸಲ್ಲಿಸಲಾಗಿತ್ತು. ಇದರ ವಿಚಾರಣೆ ಮಾಡಿರುವ ಕೋರ್ಟ್ ತಕ್ಷಣ ಕಾಂಗ್ರೆಸ್ ತನ್ನ ಪಾದಯಾತ್ರೆಯನ್ನು ನಿಲ್ಲಿಸಬೇಕು ಅಂತ ಹೈಕೋರ್ಟ್ ತಿಳಿಸಿದೆ.
ಕೋವಿಡ್ ಆತಂಕ ಇರುವ ಕಾರಣ ಯಾವುದೇ ಮೆರವಣಿಗೆ, ಪ್ರತಿಭಟನೆ, ಧರಣಿಗೆ ಅವಕಾಶ ನೀಡಬಾರದು. ಕೊವಿಡ್ ಅವಧಿಯ ಎಸ್ಒಪಿ ಉಲ್ಲಂಘನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿ ಪಿಐಎಲ್ ಇತ್ಯರ್ಥ ಪಡಿಸಿದೆ.
ಕೆಪಿಸಿಸಿ ಪರ ವಾದ ಮಂಡಿಸಿರುವ ಹಿರಿಯ ವಕೀಲ ಉದಯ್ ಹೊಳ್ಳ ಅವರು ಕಾಂಗ್ರೆಸ್ ಪಕ್ಷ ತನ್ನ ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಜೊತೆಗೆ ತಮ್ಮ ವಾದ ಮಂಡಿಸುತ್ತ ಕಾಂಗ್ರೆಸ್ ಮಾತ್ರವಲ್ಲ ಬೇರೆ ಪಕ್ಷಗಳ ಕಾರ್ಯಕ್ರಮ ನಡೆಯುತ್ತಿವೆ. ಜಾತ್ರೆ, ಶೋಭಾಯಾತ್ರೆಗಳು ನಡೆಯುತ್ತಿವೆ. ಇವುಗಳ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆ ಮೂಲಕ ಸರ್ಕಾರದ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಇದನ್ನು ಪರಿಗಣಿಸಿ ಬೇಕು ಎಂದು ಹೊಳ್ಳ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಹೊಳ್ಳ ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಸಮಾರಂಭ, ಮೆರವಣಿಗೆ ತಡೆಗೆ ಸರ್ಕಾರ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಅನ್ವಯವಾಗಬೇಕಲ್ಲವೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಬಳಿಕ ಮಾತನಾಡಿದ ಹೈಕೋರ್ಟ್ ಸಿಜೆ (ಹಿರಿಯ ನ್ಯಾಯಮೂರ್ತಿ) ರಿತುರಾಜ್ ಅವಸ್ತಿ, ಎಲ್ಲಾ ರಾಜಕೀಯ ಪಕ್ಷಗಳಿಗೂ ಎಸ್ಒಪಿ ಅನ್ವಯವಾಗುತ್ತದೆ. ಯಾವ ರಾಜಕೀಯ ಪಕ್ಷಗಳೂ ನಿಯಮ ಮೀರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.