ಬೆಂಗಳೂರು ಸೆ 18 : ರಾಜ್ಯದಲ್ಲಿ ಅಫರಾದ ಚಟುವಟಿಕೆಗಳನ್ನು ಹತ್ತಿಕ್ಕುವ ಸಲುವಾಗಿ ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆ ಬಲಪಡಿಸಲು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯ ಬಳಿಕ ಮೂರು ವಿಧೇಯಕಗಳನ್ನು ಸದನದಲ್ಲಿ ಅಂಗೀಕರಿಸಲಾಗಿದೆ.
ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿದ್ದು, ಹೊಸ ಕಾನೂನು ವ್ಯವಸ್ಥೆಯು ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ. 2021 ನೇ ಸಾಲಿನ ಬಂಧಿಗಳ ಗುರುತಿಸುವಿಕೆ ವಿಧೇಯಕದಲ್ಲಿ ಒಂದು ತಿಂಗಳು ಮತ್ತು ಅದಕ್ಕಿಂತ ಮೇಲ್ಪಟ್ಟು ಶಿಕ್ಷೆಗೊಳಗಾಗುವ ಅಪರಾಧಿಗಳ ಗುರುತು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ, ಬಂಧೀಖಾನೆ ಅಭಿವೃದ್ಧಿ ಮಂಡಳಿ ಮಸೂದೆಯಲ್ಲಿ, ಕೈದಿಗಳ ಮಾನವ ಶಕ್ತಿ ವ್ಯರ್ಥವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ. ಅವರ ಮನಪರಿವರ್ತನೆ, ಸೃಜನಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆಯೂ ವಾತಾವರಣ ನಿರ್ಮಾಣ ಮಾಡಲಾಗುತ್ತದೆ. ಅವರಿಗೆ ಹೊಸ ಜೀವನ ಆರಂಭಕ್ಕೆ ಅಗತ್ಯವಾದ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಪರಾಧಿಗಳ ಅಳತೆಯ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿಂಗ್ ಮಾದರಿಯನ್ನು ಪಡೆಯುವ ಸಂಬಂಧ 2021 ನೇ ಸಾಲಿನ ಬಂಧಿಗಳ ಗುರುತಿಸುವಿಕೆಯನ್ನು ಒಳಗೊಂಡಂತೆ ಮೂರು ವಿಧೇಯಕಗಳನ್ನು ಅಂಗೀಕರಿಸಲಾಗಿದೆ.
ಸುಧೀರ್ಘ ಚರ್ಚೆಯ ಬಳಿಕ 2021 ನೇ ಸಾಲಿನ ಬಂಧಿಗಳ ಗುರುತಿಸುವಿಕೆ ವಿಧೇಯಕ, 2021 ನೇ ಸಾಲಿನ ದಂಡ ಪ್ರಕ್ರಿಯಾ ಸಂಹಿತೆವಿಧೇಯಕ ಮತ್ತು 2021 ನೇ ಸಾಲಿನ ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ವಿದೇಯಕಗಳ ಮಂಡನೆ ಮಾಡಿ, ಅಂಗೀಕಾರ ಪಡೆಯಲಾಗಿದೆ.