ರೈತ ಅನ್ನದಾತ. ಆತ ಬೆಳೆ ಬೆಳೆದ್ರೆ ನಾವು ಅನ್ನ ತಿನ್ನಬಹುದು. ಇಲ್ಲದಿದ್ರೆ ಮಣ್ಣೇ ತಿನ್ನಬೇಕು. ಆದ್ರೆ ದುರಂತ ನೋಡಿ ನಮ್ಮ ಸರ್ಕಾರಗಳು ಮಾತ್ರ ಇತ್ತೀಚೆಗೆ ರೈತರಿಗೆ ಮಣ್ಣು ತಿನ್ನಿಸೋ ಕೆಲಸ ಮಾಡುತ್ತಿದೆ. ಒಂದ್ಕಡೆ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರ ಬೆನ್ನು ಮೂಳೆಯನ್ನೇ ಮುರಿಯೋ ಕೆಲಸ ಮಾಡಲಾಗುತ್ತಿದೆ. ಇನ್ನೊಂದೆಡೆ, ಕೈಗಾರಿಕೋದ್ಯಮಿಗಳ ಅನುಕೂಲಕ್ಕೆ ರೈತರ ಬದುಕನ್ನೇ ಬರ್ಬಾದ್ ಮಾಡಲಾಗುತ್ತಿದೆ.
ಇದಕ್ಕೆ ಜ್ವಲಂತ ಸಾಕ್ಷಿಯೇ ಚಿತ್ರದುರ್ಗ ಜಿಲ್ಲೆಯ ಎಣ್ಣೆಗೆರೆ ಹಾಗೂ ಸುತ್ತಮುತ್ತಲ ಹತ್ತು ಹಳ್ಳಿಗಳಲ್ಲಿ ವಾಸಿಸೋ ರೈತರನ್ನು ಜೀವಂತ ಸಮಾಧಿ ಮಾಡ ಹೊರಟಿರೋದು. ರೈತರ ಹೊಲಗದ್ದೆ ಮಧ್ಯೆಯೇ ಕಲ್ಲು ಗಣಿಗಾರಿಕೆ ಮಾಡಲು ಜಿಲ್ಲಾಧಿಕಾರವೇ ಅವಕಾಶ ಮಾಡಿಕೊಟ್ಟಿದೆ. ಸರ್ಕಾರಿ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟಿರೋದ್ರಿಂದ ಭಯಾನಕ ಧೂಳಿನಿಂದ ರೈತರ ನೂರಾರು ಎಕರೆ ಜಮೀನಿನ ಬೆಳೆಯೇ ನಾಶವಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಈರುಳ್ಳಿ, ಶೇಂಗಾ, ಹೂ ಬೆಳೆ ಕೊಳೆತು ಹೋಗಿದೆ.
ಇವರು ನಿರಂತರವಾಗಿ ನಿಯಮಮೀರಿ ಮಾಡೋ ಕಲ್ಲು ಸ್ಫೋಟಕ್ಕೆ ಬೋರ್ವೆಲ್ಗಳೆಲ್ಲಾ ಹಾಳಾಗಿ ಹೋಗಿವೆ. ಅಂತರ್ಜಲ ಕುಸಿದು ಹೋಗುತ್ತಿದೆ. ಸ್ಫೋಟದ ತೀವ್ರತೆಗೆ ಮನೆ ಗೋಡೆಗಳೆಲ್ಲಾ ಬಿರುಕು ಬಿಟ್ಟಿವೆ. ಸ್ಫೋಟದ ವೇಳೆ ಕಲ್ಲುಗಳು ಸಿಡಿದು ದನ ಕರು, ಕುರಿಗಳ ಮೇಲೆ ಬಿದ್ದು ಅವುಗಳ ಪ್ರಾಣಕ್ಕೆ ಕಂಟವಾಗಿದೆ. ಗಣಿ ಮಾಲೀಕರು ತಮ್ಮ ಸ್ವಾರ್ಥಕ್ಕೆ ಕೆರೆಗಳನ್ನೆಲ್ಲಾ ಮುಚ್ಚಿ ಜಲಸೆಲೆಯನ್ನೇ ನಾಶ ಮಾಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಭಟನೆ ಮಾಡಿ, ಸರ್ಕಾರಿ ಅಧಿಕಾರಿಗಳಿಗೆ ದೂರು ಕೊಟ್ರೆ ಸ್ಪಂದನೆಯೇ ಮಾಡುತ್ತಿಲ್ಲ. ಪರಿಸರ ಇಲಾಖೆಯ ಅನುಮತಿ ಇಲ್ಲದಿದ್ದರೂ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರೋದು ಸಾಕಷ್ಟು ಅನುಮಾನ ಮೂಡಿಸಿದೆ.
ವಿಜಯಟೈಮ್ಸ್ ಪ್ರಶ್ನೆಗೆ ಪಿಡಿಓ ತಬ್ಬಿಬ್ಬು: ಅಕ್ರಮ ಗಣಿಗಾರಿಕೆ ಬಗ್ಗೆ ಪಂಚಾಯತ್ ಪಿಡಿಓ ಅವರಿಗೆ ವಿಜಯಟೈಮ್ಸ್ ಕವರ್ಸ್ಟೋರಿ ತಂಡ ಪ್ರಶ್ನೆ ಕೇಳಿದಾಗ ಅವರು ತಬ್ಬಿಬ್ಬಾದ್ರು. ಬಳಿಕ ಜನರಿಗೆ ಈ ಗಣಿಗಳಿಂದ ತೊಂದರೆ ಆಗ್ತಿದೆ ಅಂತ ದೂರು ಕೊಟ್ರೆ ಗಣಿಗಳ ವಿರುದ್ಧ ಕ್ರಮಕೈಗೊಳ್ಳೋದಾಗಿ ಭರವಸೆ ನೀಡಿದ್ರು.