ಚೆನ್ನೈ: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಕೂಡಲೇ ‘ಕೈ’ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ನಟಿ ಖುಷ್ಬೂ ಸುಂದರ್, ನಾನು ಬುದ್ದಿಮಾಂದ್ಯ ಪಕ್ಷದಿಂದ ಹೊರಬಂದಿದ್ದೇನೆ ಎಂದು ಲೇವಡಿ ಮಾಡಿದ್ದಾರೆ.
ಚೆನ್ನೈನಲ್ಲಿ ಸುದ್ದಗಾರರೊಂದಿಗೆ ಮಾತನಾಡಿರುವ ಅವರು, ನಾನು ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೆ. ಪಕ್ಷಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಆದರೆ ಇದೀಗ ಬುದ್ದಿಮಾಂದ್ಯ ಪಕ್ಷದಿಂದ ಹೊರಬಂದಿದ್ದೇನೆ. ಕಾಂಗ್ರೆಸ್ ಪಕ್ಷ ತ್ಯಜಿಸಿದ ಬಳಿಕ ನಾನು ಇಷ್ಟು ದಿವಸ ಬುದ್ದಿಮಾಂದ್ಯ ಪಕ್ಷದಲ್ಲಿದ್ದೆ ಎಂದು ತಿಳಿದಿದೆ ಎಂದು ಹೇಳಿದ್ದಾರೆ.
ನಟಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ಸೋಮವಾರ ಹೊಸದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.ಈ ನಡುವೆ ಖುಷ್ಬೂ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆ.ಎಸ್. ಅಲಗಿರಿ ಅವರು, ಖುಷ್ಬೂ ಅವರು ಪಕ್ಷ ತ್ಯಜಿಸಿದ್ದಕ್ಕೆ ನಮಗೆ ಯಾವುದೇ ನಷ್ಟವಿಲ್ಲ. ಬಿಜೆಪಿಯವರು ಅವರನ್ನು ಆಹ್ವಾನಿಸಿಲ್ಲ. ಅವರೇ ಹೋಗಿ ಪಕ್ಷಕ್ಕೆ ಸೇರಿದ್ದಾರೆ. ನಾವು ರಾಜೀನಾಮೆಯನ್ನು ಅಂಗೀಕರಿಸಿದ್ದೇವೆ ಎಂದಿದ್ದಾರೆ.