ವಿಜಯಟೈಮ್ಸ್ ಕವರ್ಸ್ಟೋರಿ ತಂಡ ಭಯಾನಕ ಮಾಫಿಯಾದ ವಿರುದ್ಧ ಹೋರಾಟ ಮಾಡಿದೆ. ಈ ಮಾಫಿಯಾ ಭಯಾನಕವಾಗಿದೆ, ಬಲಶಾಲಿಯಾಗಿದೆ. ಈ ಮಾಫಿಯಾಕ್ಕೆ ಸುಪ್ರೀಂ ಕೋರ್ಟ್ ಆದೇಶವೇ ಕಾಲಕಸ. ಈ ಅಪಾಯಕಾರಿ ಮಾಫಿಯಾ ಎಲ್ಲಾ ಇಲಾಖೆ ಅಧಿಕಾರಿಗಳನ್ನ ತನ್ನ ಕೈಗೊಂಬೆಯಾಗಿಸಿ ಲಂಚ ಕೊಟ್ಟು ಸಾಕುತ್ತಿದೆ. ಹಾಗಾಗಿ ರಾಜಧಾನಿ ಬೆಂಗಳೂರಲ್ಲೇ ಈ ದಂಧೆಯನ್ನ ಬಿಂದಾಸಾಗಿ ನಡೆಸುತ್ತಿದೆ. ನಮ್ಮ ಆರೋಗ್ಯಕ್ಕೆ, ನಮ್ಮ ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾಗಿರೋ ಆ ದಂಧೆ ಯಾವುದು ಗೊತ್ತಾ? ಬ್ಯಾನಾಗಿರೋ ಪ್ಲಾಸ್ಟಿಕ್ ತಯಾರಿ ದಂಧೆ.
ನಮ್ಮ ರಾಜಧಾನಿ ಬೆಂಗಳೂರಲ್ಲೇ ಈ ದಂಧೆ ರಾಜಾರೋಷವಾಗಿ ನಡೀತಿದೆ ಅನ್ನೋ ಸುದ್ದಿ ತಿಳಿದ ಕವರ್ಸ್ಟೋರಿ ತಂಡ ಈ ಫ್ಯಾಕ್ಟರಿಗಳ ಬಣ್ಣಬಯಲು ಮಾಡಲು ನಿರ್ಧಾರ ಮಾಡಿತು. ಈ ಫ್ಯಾಕ್ಟರಿಗಳು ನಿತ್ಯ ಕಾರ್ಯನಿರ್ವಹಿಸುತ್ತಿವೆ ಅನ್ನೋ ಪಕ್ಕಾ ಮಾಹಿತಿಯ ಮೇರೆಗೆ ನಾವು ಮೊದಲಿಗೆ ಬೆಂಗಳೂರಿನ ನಾಯಂಡಹಳ್ಳಿ, ಕಾವೇರಿಪುರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರೋ ಫ್ಯಾಕ್ಟರಿಗಳ ಮೇಲೆ ದಾಳಿ ಮಾಡಲು ಆರೋಗ್ಯ ಅಧಿಕಾರಿಗಳ ಬೆಂಬಲ ಪಡೆದು ನುಗ್ಗಿದೆವು.
ಈ ಅಕ್ರಮ ಫ್ಯಾಕ್ಟರಿಯವರು ಹೊರಗಡೆಯಿಂದ ಬೀಗ ಹಾಕಿ, ಒಳಗಿನಿಂದ ಕೆಲಸ ಮಾಡ್ತಿದ್ರು. ಆದ್ರೆ ನಾವು ಬಂದಿರೋ ಮಾಹಿತಿ ಬಂದಿದ್ದೇ ತಡ ಫ್ಯಾಕ್ಟರಿಗೆ ಹಾಕಿ ಬಂದ್ ಮಾಡಿದ್ರು. ಬಾಗಿಲು ತೆಗೆಯಲು ಹೇಳಿದ್ರೂ ಬಾಗಿಲು ತೆಗೆಯಲು ಸಿದ್ಧರರಲಿಲ್ಲ. ಬಳಿಕ ನಾವು ಶತಪ್ರಯತ್ನ ಮಾಡಿ ಬಾಗಿಲು ತೆಗೆದು ಒಳನುಗ್ಗಿದ್ವಿ. ಆಗ ಕರಾಳ ಸತ್ಯಗಳಲ್ಲೇ ಬಯಲಾದವು. ಇವರು ಯಾವುದೇ ಪರವಾನಗಿ ಇಲ್ಲದೆ ಇವರು ಫ್ಯಾಕ್ಟರಿ ನಡೆಸುತ್ತಿದ್ರು. ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಲಂಚ ಕೊಟ್ಟು ಇವರು ಕಾನೂನು ಬಾಹಿರ ಕೆಲಸ ಮಾಡುತ್ತಿದ್ರು. ಇದನ್ನ ಮನಗಂಡ ಅಧಿಕಾರಿಗಳು ಈ ಎಲ್ಲಾ ಫ್ಯಾಕ್ಟರಿಗಳಿಗೆ ಬೀಗ ಹಾಕಲು ನಿರ್ಧರಿಸಿದ್ರು.
ನಿಷೇಧಿತ ಪ್ಲಾಸ್ಟಿಕ್ ಕವರ್, ಇತರೆ ಪ್ಲಾಸ್ಟಿಕ್ ವಸ್ತುಗಳನ್ನ ತಯಾರಿಸಿ ಪರಿಸರದ ಮೇಲೆ ನಿರಂತರ ದಾಳಿ ಮಾಡೋ ಇಂಥಾ ಪ್ಯಾಕ್ಟರಿಗಳ ವಿರುದ್ಧ ಹೋರಾಟ ಮಾಡಲೇ ಬೇಕಾಗಿದೆ. ಅದಕ್ಕಾಗಿ ವಿಜಯಟೈಮ್ಸ್ ಕವರ್ಸ್ಟೋರಿ ತಂಡ ದಂಧೆಕೋರರ ವಿರೋಧದ ನಡುವೆ ತನ್ನ ಹೋರಾಟ ಮುಂದುವರೆಸಿ ಒಟ್ಟು ಮೂರು ಫ್ಯಾಕ್ಟರಿಗಳಿಗೆ ಬೀಗ ಜಡಿಯಿತು. ತನ್ನ ಹೋರಾಟ ಇನ್ನೂ ಬೇರೆ ಬೇರೆ ಪ್ರದೇಶಗಳಲ್ಲಿ ಮುಂದುವರೆಸಿ ಪರಿಸರ ರಕ್ಷಣೆಗೆ ಮುನ್ನುಗ್ಗಲಿದೆ ಕವರ್ಸ್ಟೋರಿ ತಂಡ.