ಚಂಡೀಗಢ, ಅ. 16: ಬರೋಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಸ್ತಿಪಟು ಯೋಗೇಶ್ವರ್ ದತ್ ಸ್ಪರ್ಧಿಸಲಿದ್ದಾರೆ.
ʻಕುಸ್ತಿಪಟು ಯೋಗೇಶ್ವರ್ ಅವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಸೋನಿಪತ್ನ ಬರೋಡಾದಲ್ಲಿ ಇದೇ ನವೆಂಬರ್ 3ರಂದು ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆʼ ಪಕ್ಷದ ಮೂಲಗಳು ತಿಳಿಸಿವೆ.
ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದೆ.
ಏಪ್ರಿಲ್ನಲ್ಲಿ ಕಾಂಗ್ರೆಸ್ ಶಾಸಕ ಕೃಷ್ಣನ್ ಹೂಡ ಅವರು ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಹೂಡ ಅವರ ವಿರುದ್ಧ ಸ್ಪರ್ಧಿಸಿ ಯೋಗೇಶ್ವರ್ ಸೋತಿದ್ದರು.
ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದ ಮಾರನೇ ದಿನವೇ ಕ್ರೀಡಾಪಟುಗಳಾದ ಬಬಿತಾ ಪೊಗಾಟ್, ಸಾಕ್ಷಿ ಮಲಿಕ್, ಗೀತಾ ಪೊಗಾಟ್ ಹಾಗೂ ಯೋಗೇಶ್ವರ್ ದತ್ ಅವರು ದೆಹಲಿಯಲ್ಲಿ ಸಿಎಂ ಎಂ.ಎಲ್.ಖತ್ತರ್ ಅವರನ್ನು ಭೇಟಿಯಾಗಿದ್ದರು.
ಬಿಜೆಪಿ ಎಂದೂ ಗೆಲ್ಲದ ಬರೋಡಾ ಕ್ಷೇತ್ರದಲ್ಲಿ ಉಮೇದುವಾರಿಕೆ ನೀಡುವಂತೆ ದತ್ ಪರವಾಗಿ ಕ್ರೀಡಾಪಟುಗಳು ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ, ಪಕ್ಷವು ಗುರುವಾರ ದತ್ ಅವರನ್ನು ಹೆಸರನ್ನು ಸೂಚಿಸಿದೆ.
ಕುಸ್ತಿಪಟು ಯೋಗೇಶ್ವರ್ ದತ್ ಅವರು 2012ರ ಒಲಂಪಿಕ್ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅಲ್ಲದೇ, 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 2013ರಲ್ಲಿ ಅವರಿಗೆ ಪದ್ಮಶ್ರೀ ಸಿಕ್ಕಿದೆ.