ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಕಾರಣವಾಗಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಬೆನ್ನಲ್ಲೇ ಮೈಸೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ವಿಧಾನ ಪರಿಷತ್ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ವಿಶ್ವನಾಥ್, ಹೂಗುಚ್ಚ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.
ಈ ವೇಳೆ ಮಾತನಾಡಿದ ವಿಶ್ವನಾಥ್, ನನ್ನನ್ನ ಸಾಹಿತ್ಯ ವಲಯದಿಂದ ಆಯ್ಕೆ ಮಾಡಿದ್ದಾರೆ. ನನ್ನ ರಾಜಕೀಯ ಸಾಹಿತ್ಯವನ್ನ ಗೌರವಿಸಿರುವುದು ಸಂತೋಷ ತಂದಿದೆ. ವಿಧಾನಪರಿಷತ್ ಆಯ್ಕೆ ಆಗಿರೋದು ಹೆಮ್ಮೆ ಅನ್ನಿಸುತ್ತಿದೆ. ಇದು ಅಧಿಕಾರ ಅಲ್ಲ ಜವಬ್ದಾರಿ ನಿರ್ವಹಿಸಲು ಸಿಕ್ಕ ಅವಕಾಶ. ಕನ್ನಡ ಭಾಷೆ, ಸಂಸ್ಕೃತಿ, ಹಾಗೂ ಅಪಾರ ಸಾಹಿತ್ಯದ ಕಡೆಗೆ ನಾನು ಆದ್ಯತೆ ನೀಡಲಿದ್ದು, ನನ್ನ ಆಯ್ಕೆಗೆ ಯಾವುದೇ ತಾಂತ್ರಿಕ ಅಡೆತಡೆ ಇಲ್ಲ. ನಾವು ಚುನಾವಣೆಗೆ ಸ್ಪರ್ಧಿಸಿ ಸೋತಾಗಲೇ ನಾವು ಅರ್ಹರಾಗಿದ್ದೇವೆ. ಈಗ ಯಾವುದೇ ಕಾನೂನಿನ ತೋಡಕಿಲ್ಲ ಎಂದರು.
ಎಚ್.ವಿಶ್ವನಾಥ್ ರಾಜಕೀಯ ಅಂತ್ಯ ಎಂಬ ಎದುರಾಳಿಗಳ ಹೇಳಿಕೆಗೆ ತಿರುಗೇಟು ನೀಡಿದ ಹಳ್ಳಿಹಕ್ಕಿ, ರಾಜಕಾರಣಕ್ಕೆ ಅಂತ್ಯವೇ ಇಲ್ಲ. ಇದು ನಮ್ಮಲ್ಲಿ ಮಾತ್ರವಲ್ಲ ಜಗತ್ತಿನಲ್ಲೆ ಎಲ್ಲೂ ರಾಜಕೀಯಕ್ಕೆ ಅಂತ್ಯ ಇಲ್ಲ. ಉಸಿರು ಇರುವ ತನಕ ರಾಜಕಾರಣ ಮಾಡಬಹುದು. ಇದು ವಯಸ್ಸಿನ ಲೆಕ್ಕ ಅಲ್ಲ ನನ್ನ ಅನುಭವಕ್ಕೆ ನನ್ನ ಸಾಹಿತ್ಯಕ್ಕೆ ಗೌರವ ಸಿಕ್ಕ ಗೌರವ. ಹಾಗಾಗಿ ಇದನ್ನ ಸಂತೋಷದಿಂದ ಸ್ವೀಕರಿಸುತ್ತೇನೆ. ಯಾರು ಸಹ ಯಾರ ರಾಜಕಾರಣವನ್ನ ಮುಗಿಸೋಲ್ಲ. ಅದನ್ನ ನಿರ್ಧಾರ ಮಾಡೋದು ಜನಶಕ್ತಿ ಮಾತ್ರ. ಸದ್ಯಕ್ಕೆ ಪರಿಷತ್ ಸದಸ್ಯನಾಗಿದ್ದೇನೆ. ಮಂತ್ರಿ ಆಗೋ ವಿಚಾರ ನೋಡೋಣ. ಹೀಗೆ ಆಗಬೇಕು ಇಲ್ಲ ಅಂತ ಏನೂ ಇಲ್ಲ. ಎಲ್ಲವನ್ನ ನಿಧಾನವಾಗಿ ಮಾತನಾಡೋಣ ಎಂದರು.
ಇದೇ ವೇಳೆ “ನನ್ನ ಜೊತೆ ಇದ್ದವರಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಹೆಚ್ಡಿಕೆ ಹೇಳಿಕೆ” ಟಾಂಗ್ ನೀಡಿದ ವಿಶ್ವನಾಥ್, ಕುಮಾರಸ್ವಾಮಿ ಅರ್ಧ ಸತ್ಯ ಮಾತ್ರ ಹೇಳಿದ್ದಾರೆ. ಇನ್ನು ಅರ್ಧ ಸತ್ಯವನ್ನ ಕುಮಾರಸ್ವಾಮಿ ಹೇಳಬೇಕು. ಆಗ ಎಲ್ಲರಿಗು ಗೊತ್ತಾಗಲಿದೆ ಎಂದು ಕಿಡಿಕಾರಿದರು.
ವಿಪಕ್ಷ ನಾಯಕರ ವಿರುದ್ಧ ಇಷ್ಟಕ್ಕೇ ನಿಲ್ಲದ ವಿಶ್ವನಾಥ್ ಅವರು ಟೀಕಾಪ್ರಹಾರ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಮುಂದುವರೆಯಿತು. ಕೋವಿಡ್-19 ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬೀದಿಲಿ ನಿಂತು ಲೆಕ್ಕ ಕೇಳೋದಲ್ಲ. ಎಲ್ಲಿ ಕೇಳಬೇಕೋ ಅಲ್ಲಿ ಕೇಳಿ. ಸಿದ್ದರಾಮಯ್ಯ ನೀವು ಅಸೆಂಬ್ಲಿಯಲ್ಲಿ ನಿಂತು ಲೆಕ್ಕ ಕೇಳಿ. ಅದಕ್ಕೆ ಲೆಕ್ಕಪತ್ರ ಸಮಿತಿ ಇದೆ. ಅಸೆಂಬ್ಲಿ ಶುರುವಾಗಲಿ ಅಲ್ಲಿ ಬಂದು ಕೇಳಿ. ಯಾವ ಗ್ರಾಮ ಪಂಚಾಯತಿ ಸದಸ್ಯನು ಈ ಥರ ಬೀದಿಲಿ ನಿಂತು ಲೆಕ್ಕ ಕೇಳೋಲ್ಲ. ಸಿದ್ದರಾಮಯ್ಯ ಬರಿ ರಾಜಕಾರಣ ಮಾಡ್ತಾರೆ ಅಷ್ಟೇ. ಸಿಎಂ ಆಗಿದ್ದವರು ಆಯವ್ಯಯ ಬಗ್ಗೆ ಗೊತ್ತಿರೋರೇ ಈ ಥರ ಮಾತನಾಡಬಹುದಾ?. ಲೆಕ್ಕ ಎಲ್ಲೂ ಹೋಗೋಲ್ಲ ನಿಧಾನವಾಗಿ ಕೇಳಿ ಎಂದು ಸಲಹೆ ನೀಡಿದರು.