ವಿಜಯಟೈಮ್ಸ್ ಕವರ್ಸ್ಟೋರಿ ತಂಡ ಭಯಾನಕ ಮಾಫಿಯಾದ ಬೇಟೆಗೆ ಹೊರಟಿದೆ. ಇದು ಕತ್ತಲ ಬೇಟೆ. ತುಂಗಾಭದ್ರಾ ನದಿಯ ಸಂಪತ್ತನ್ನು ಕೊಳ್ಳೆಯುವ ಖದೀಮರ ಬೇಟೆ. ನಿತ್ಯ ರಾತ್ರಿ ಇಂಥಾ ನೂರಾರು ಲಾರಿಗಳು ಓಡಾಡ್ತನೇ ಇರ್ತವೆ. ಗಣಿ ಸಂಪತ್ತನ್ನ ಲೂಟಿ ಹೊಡಿತಾನೇ ಇರ್ತವೆ. ನಡುರಾತ್ರಿಯಲ್ಲಿ ಈ ದಂಧೆಕೋರರ ಬೆನ್ನತ್ತಿ ಹೊರಟ ಕವರ್ಸ್ಟೋರಿ ತಂಡಕ್ಕೆ ಶಾಕ್ ಮೇಲೆ ಶಾಕ್ ಕಾದಿತ್ತು.
ದುರಂತ ಅಂದ್ರೆ ಹಾವೇರಿಯ ಗುತ್ತಲ ಪೊಲೀಸ್ ಠಾಣೆ ಮುಂದೆಯೇ ರಾಜಾರೋಷವಾಗಿ ಮರಳು ಲೂಟಿ ಮಾಡಿಕೊಂಡು ಹೋಗ್ತಿದ್ದಾರೆ. ಆದ್ರೆ ಅದನ್ನು ತಡೆಯುವ ಧಮ್ ಯಾವೊಬ್ಬನಿಗೂ ಇಲ್ಲ. ನಾವು ಇತ್ತ ನಡುರಾತ್ರಿಯಲ್ಲಿ ಮರಳು ಮಾಫಿಯಾ ಮಂದಿಯ ರಹಸ್ಯ ಕಾರ್ಯಾಚರಣೆ ಮಾಡುತ್ತಿದ್ರೆ, ಅತ್ತ ಗುತ್ತಲ ಪೊಲೀಸ್ ಠಾಣೆಯ ಪಕ್ಕದಲ್ಲೇ ಪೊಲೀಸರು ಸಬ್ ಇನ್ಸ್ಪೆಕ್ಟರ್ ಸಿದ್ದರೋಡ ಬಡಿಗೇರ ಅವರ ಬರ್ತ್ಡೇ ಪಾರ್ಟಿ ಮಾಡುತ್ತಿದ್ರು.
ರಾತ್ರಿ ಹೊತ್ತು ಇಷ್ಟೊಂದು ಭಯಂಕರವಾಗಿ ನಡೆಯೋ ಈ ದಂಧೆಯ ಇನ್ನಷ್ಟು ಕರಾಳ ಸತ್ಯವನ್ನ ಬಯಲು ಮಾಡಲೇಬೇಕು ಅಂತ ಕವರ್ಸ್ಟೋರಿ ತಂಡ ನಿರ್ಧರಿಸಿತು. ಅದಕ್ಕಾಗಿ ಇನ್ನಷ್ಟು ಅಪಾಯ ಎದುರಿಸಲು ಸಜ್ಜಾಯಿತು. ಹಾವೇರಿಯ ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯೋ ಈ ಅಪಾಯಕಾರಿ ದಂಧೆಯ ಒಳಗೆ ನುಗ್ಗಿತು. ನಮ್ಮ ತಂಡ ಈ ಮರಳು ಮಾಫಿಯಾವನ್ನು ಹತ್ತಿರದಿಂದಲೇ ನೋಡಿಯೇ ಬಿಡೋಣ. ನಮ್ಮ ಗೃಹ ಸಚಿವರನ್ನು, ಗಣಿ ಇಲಾಖೆಯನ್ನು, ಪೊಲೀಸರನ್ನು ಹೆದರಿಸಿಟ್ಟ ಈ ಮಾಫಿಯಾ ಎಷ್ಟು ಭಯಾನಕವಾಗಿದೆ ಅಂತ ಪರೀಕ್ಷಿಸಿಯೇ ಬಿಡೋಣ ಅಂತ ನಾವು ಮರಳುಗಾರಿಕೆ ನಡೆಯೋ ಜಾಗಕ್ಕೆ ತೆರಳಿದ್ವಿ. ಮೊದಲು ನಾವು ಮರಳು ಮಾಫಿಯಾ ಅಡ್ಡದಲ್ಲಿ ರಹಸ್ಯ ಕಾರ್ಯಾಚರಣೆ ಮಾಡಿದ್ವಿ. ಅಲ್ಲಿ ದಂಧೆಕೋರರನ್ನ ಭೇಟಿಯಾದ್ವಿ. ಆಗ ಅವರು ನಮಗೆ ಕೆಲ ಸೀಕ್ರೆಟ್ ಬಯಲು ಮಾಡಿದ್ರು. ಪ್ರತಿ ಲೋಡ್ಗೆ ಸ್ಥಳೀಯ ಪೊಲೀಸರಿಗೆ ೩೦ಸಾವಿರ ರೂಪಾಯಿ ಕೊಟ್ರೆ ಅವರು ಪಾಸ್ ಕೊಟ್ತಾರಂತೆ. ಅಲ್ಲಿಗೆ ಅಕ್ರಮ ಮಾಫ್ ಆಗುತ್ತಂತೆ.
ಇದು ತೆಪ್ಪದ ಮೂಲಕ ಮರುಳು ತೆಗೆದು ಸಾಗಿಸುವ ಅಕ್ರಮ ದಂಧೆ ಇಲ್ಲಿ ನಡೆದ್ರೆ, ಮುಂದೆ ನೇರವಾಗಿ ನದಿಯೊಳಗೆ ಇಳಿದು ಮರಳುಗಾರಿಕೆ ಮಾಡೋ ಜಾಗದ ಕಡೆಗೆ ನಾವು ತೆರಳಿದ್ವಿ. ಇಲ್ಲಿಯೂ ಪೊಲೀಸರಿಗೆ ಮಂತ್ಲೀ ಕೊಟ್ಟೇ ಬಿಂದಾಸಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ ಅನ್ನೋ ಅಂಶ ನಮ್ಮ ರಹಸ್ಯ ಕಾರ್ಯಾಚರಣೆ ವೇಳೆ ಗೊತ್ತಾಯಿತು. ಇಂಥಾ ಭಯಾನಕ ಮಾಫಿಯಾಕ್ಕೆ ಅವಕಾಶ ಮಾಡಿಕೊಟ್ಟು, ಅವರ ಎಂಜಲು ಕಾಸಿಗೆ ಕೈಯೊಡ್ಡಿ ನಾಡಿಗೆ ದ್ರೋಹ ಬಗೆಯುತ್ತಿರೋ ಪೊಲೀಸರನ್ನೊಮ್ಮೆ ಮಾತನಾಡಿಸೋಣ ಅಂತ ಗುತ್ತಲ ಪೊಲೀಸ್ ಠಾಣೆಗೆ ಹೋದ್ವಿ. ಅಲ್ಲಿನ ಪೊಲೀಸರ ಮಾತು ಕೇಳಿ ನಿಜವಾಗ್ಲೂ ನನಗೆ ನಗು ಬಂತು. ಇನ್ನು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರನ್ನೂ ಒಮ್ಮೆ ಮಾತನಾಡಿಸಿ ಬಿಡೋಣ ಅಂತ ಹೇಳಿ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಅವರನ್ನು ಭೇಟಿಯಾದ್ವಿ. ಅವರು ಈ ಪ್ರದೇಶಗಳಲ್ಲಿ ಮರಳುಗಾರಿಕೆ ಮಾಡಲು ನಾವು ಅವಕಾಶವನ್ನೇ ಕೊಟ್ಟಿಲ್ಲ ಅಂತ ಸ್ಪಷ್ಟಪಡಿಸಿ, ಅಲ್ಲಿ ಅಕ್ರಮ ನಡೆಯುತ್ತಿದೆ ಅನ್ನೋದು ತಮಗೆ ಗೊತ್ತೇ ಇಲ್ಲ ಅಂತ ಹೇಳಿ ಜವಾವ್ದಾರಿಯಿಂದ ನುಣುಚಿಕೊಂಡ್ರು. ಹೇಗಿದೆ ನೋಡಿ ವ್ಯವಸ್ಥೆ. ನಿಜವಾಗ್ಲೂ ನಾಚಿಕೆಯಾಗುತ್ತೆ. ಗೃಹಸಚಿವರ ಜಿಲ್ಲೆಯಲ್ಲೇ ಪೊಲೀಸರು ಭ್ರಷ್ಟಾಚಾರ ನಡೆಸಿದ್ರೆ ಇನ್ನು ರಾಜ್ಯದ ಗತಿಯೇನು?