ಕೊಟ್ಟಿಗೆಹಾರ, ಅ.13: ದಿನೇಶ್ ಬಾಬು ನಿರ್ದೇಶನದ `ಕಸ್ತೂರಿ ಮಹಲ್’ ಚಿತ್ರಕ್ಕೆ ಕೊಟ್ಟಿಗೆ ಹಾರದಲ್ಲಿ ಬಿಡುವಿರದ ಚಿತ್ರೀಕರಣ ಸಾಗಿದೆ. ಕೊಟ್ಟಿಗೆಹಾರದ ಹಸಿರು ಪರಿಸರದಲ್ಲಿ ನಡೆಯುತ್ತಿರುವ ಚಿತ್ರೀಕರಣಕ್ಕೆ ಮಳೆಯೂ ಸಾಥ್ ನೀಡಿದೆ.
ಅಕ್ಟೋಬರ್ 5ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಶಾನ್ವಿ ಶ್ರೀವಾತ್ಸವ್, ಸ್ಕಂದ ಅಶೋಕ್, ರಂಗಾಯಣ ರಘು, ಶ್ರುತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ. `ಶ್ರೀಭವಾನಿ ಆರ್ಟ್ಸ್’ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನವೀನ್ ಆರ್ ಸಿ ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನ ಕಸ್ತೂರಿ ಮಹಲ್ ಚಿತ್ರಕ್ಕಿದೆ.
ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಆರಂಭದಲ್ಲಿ ರಚಿತಾರಾಮ್ ನಾಯಕಿ ಆಗಿದ್ದರು. ಹಠಾತ್ತಾಗಿ ಅವರು ಚಿತ್ರವನ್ನು ನಿರಾಕರಿಸಿದ ಬಳಿಕ ಇದೀಗ ಶಾನ್ವಿ ನಾಯಕಿಯ ಸ್ಥಾನ ನಿರ್ವಹಿಸುತ್ತಿದ್ದಾರೆ.