ಕೇರಳ, ಏ. 16: ದೇಶದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಲವೆಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಬೆಡ್, ಐಸಿಯು ವ್ಯವಸ್ಥೆ, ಆಕ್ಸಿಜನ್ ಸೌಲಭ್ಯದಲ್ಲೇ ಕೊರತೆ ಉಂಟಾಗುತ್ತಿದ್ದು ಸೋಂಕಿತರು ಸೂಕ್ತ ಚಿಕಿತ್ಸೆ ದೊರೆಯದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಕೇರಳದ ಸರ್ಕಾರಿ ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಲು ಭಾರತ್ ಪೆಟ್ರೋಲಿಯಂ ಮುಂದೆ ಬಂದಿದೆ.
ಪೆಟ್ರೋಲಿಯಂ ಕ್ಷೇತ್ರದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕೊಚ್ಚಿಯ ರಿಫೈನರಿಯಿಂದ ಪ್ರತಿನಿತ್ಯ 1.5 ಟನ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಲು ನಿರ್ಧರಿಸಿದೆ. ಮೆಡಿಕಲ್ ಆಕ್ಸಿಜನ್ಗೆ ಬೇಡಿಕೆ ಹೆಚ್ಚುತ್ತಿರುವ ಹೊತ್ತಿನಲ್ಲಿಯೇ ಭಾರತ್ ಪೆಟ್ರೋಲಿಯಂನಿಂದ ಇಂಥದ್ದೊಂದು ನಿರ್ಧಾರ ಹೊರಬಿದ್ದಿದ್ದು, ಕೇರಳದ ಸರ್ಕಾರಿ ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡುವುದಾಗಿ ತಿಳಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸೋಂಕು ಹಬ್ಬದಂತೆ ತಡೆಯುವ ಒಂದು ಮಾರ್ಗವಾಗಿ ಕೊರೊನಾ ಲಸಿಕೆ ತೆಗೆದುಕೊಳ್ಳಲು ಜನರನ್ನು ಉತ್ತೇಜಿಸಲಾಗುತ್ತಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಕೊವಿಡ್ ಲಸಿಕೆ ಪೂರೈಕೆಯಲ್ಲೂ ಕೊರತೆ ಕಾಣಿಸಿಕೊಂಡಿದ್ದು, ಮುಂಬೈನ್ ಹಾಫ್ಕೀನ್ಸ್ ಇನ್ಸ್ಟಿಟ್ಯೂಟ್ಗೆ ಕೊರೊನಾ ಲಸಿಕೆ ಕೊವ್ಯಾಕ್ಸಿನ್ ಉತ್ಪಾದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದು, ಸೋಂಕು ನಿಯಂತ್ರಣಕ್ಕೆ ದೆಹಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಮೊರೆ ಹೋಗಿದೆ. ಈ ನಡುವೆಯೇ ದೆಹಲಿ ಪೊಲೀಸ್ ಇಲಾಖೆಯ 388 ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆರಕ್ಷಕರಲ್ಲಿ ಆತಂಕ ಮೂಡಿಸಿದೆ.