ಶ್ರೀ ರಾಮುಲು ಆರೋಗ್ಯ ಪದವಿಗೆ ಕುತ್ತಾಗಿದ್ದೇನು? ಟಂಡರ್ ಗೋಲ್ಮಾಲ್ಗೆ ಬಲಿಯಾದ್ರಾ ರಾಮುಲು? ಯಸ್, ಇಂಥಾ ಒಂದು ಅನುಮಾನ ಈಗ ರಾಜ್ಯದ ಜನತೆಯನ್ನ ಕಾಡ್ತಾ ಇದೆ. ಇದಕ್ಕೆ ಕಾರಣ ಏನು ಗೊತ್ತಾ? ಅಂಥಾ ಮಹಾಮಾರಿ ಕೊರೋನಾ ರಾಜ್ಯವನ್ನ ಪೀಡಿಸಿದಾಗ ಆರೋಗ್ಯ ಇಲಾಖೆ ಸಾಕಷ್ಟು ವೈಫಲ್ಯ ಕಂಡಿತ್ತು. ಆರೋಗ್ಯ ಇಲಾಖೆ ನಿರ್ಲಕ್ಷö್ಯದಿಂದ ಜನ ತುಂಬಾನೇ ಕಷ್ಟ ಅನುಭವಿಸಿದ್ರು. ಆಗ್ಲೂ ರಾಜ್ಯದ ಮುಖ್ಯಮಂತ್ರಿ ಶ್ರೀರಾಮುಲು ಅವರನ್ನ ಆರೋಗ್ಯ ಪಟ್ಟದಿಂದ ಕೆಳಗಿಳಿಸಲಿಲ್ಲ.
ಇನ್ನು ಕೊರೋನಾ ಪೀಡಿತರು ಬೆಡ್ ಇಲ್ಲದೆ, ಸರಿಯಾಗಿ ಟ್ರೀಟ್ಮೆಂಟ್ ಸಿಗದೆ ಒದ್ದಾಡಿದ್ರು. ಜನ ಆಕ್ರೋಶಿತರಾಗಿ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ರು. ಆವಾಗ್ಲೂ ಈ ಸರ್ಕಾರ ಶ್ರೀರಾಮುಲು ಅವರ ಆರೋಗ್ಯ ಸಚಿವ ಸ್ಥಾನ ಕಿತ್ತುಕೊಳ್ಳಲಿಲ್ಲ. ಇಷ್ಟು ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳು ಕೊರೋನಾ ಹೆಸರಲ್ಲಿ ಜನರನ್ನು ದರೋಡೆ ಮಾಡಲಾರಂಭಿಸಿದವು. ಲಕ್ಷಗಟ್ಟಲೆ ಬಿಲ್ ಹಾಕಿ ಜನರ ಬದುಕಿನ ಜೊತೆ ಚಲ್ಲಾಟ ಆಡಿದವು. ಖಾಸಗಿ ಆಸ್ಪತ್ರೆಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ವಿಫಲವಾದಗಲೂ ಶ್ರೀರಾಮುಲು ಅವರ ಆರೋಗ್ಯ ಸಚಿವ ಸ್ಥಾನಕ್ಕೆ ಕುತ್ತು ಬರಲಿಲ್ಲ. ಇನ್ನು ಕೊರೋನಾ ಹೆಸರಲ್ಲಿ ಆರೋಗ್ಯ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೀತಿದೆ. ಸಾವಿರಾರು ಕೋಟಿ ರೂಪಾಯಿ ದುರ್ಬಳಕೆಯಾಗಿದೆ ಅಂತ ಗಂಭೀರವಾಗಿ ಆರೋಪಿಸಿದವು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಾಕ್ಷಿ ಸಮೇತವಾಗಿ ಗಂಭೀರ ಆರೋಪ ಮಾಡಿದಾಗಲೂ ಬಿಜೆಪಿ ಸರ್ಕಾರ ಶ್ರೀರಾಮುಲು ಅವರನ್ನು ಆರೋಗ್ಯ ಮಂತ್ರಿ ಸ್ಥಾನದಿಂದ ಕದಲಲೂ ಬಿಡಲಿಲ್ಲ. ಆದ್ರೆ ಈಗ ಯಾಕೆ ಈ ಸಡನ್ ನಿರ್ಧಾರ? ಯಾಕೆ ರಾಮುಲು ಅವರ ಆರೋಗ್ಯ ಪಟ್ಟಕ್ಕೆ ಬಂತು ಕುತ್ತು? ವಿಜಯಟೈಮ್ಸ್ಗೆ ಸಿಕ್ಕಿದೆ ಎಕ್ಸ್ಕ್ಲೂಸಿವ್ ಡಾಕ್ಯುಮೆಂಟ್: ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟ ವಿಜಯಟೈಮ್ಸ್ ಕವರ್ಸ್ಟೋರಿ ತಂಡಕ್ಕೆ ಸಿಕ್ತು ಎಕ್ಸ್ಕ್ಲೂಸಿವ್ ಡಾಕ್ಯುಮೆಂಟ್.
ಈ ಡಾಕ್ಯುಮೆಂಟನ್ನ ಅಧ್ಯಯನ ಮಾಡ್ತಾ ಹೋದ ವಿಜಯಟೈಮ್ಸ್ ತಂಡಕ್ಕೆ ಕೆಲ ಪ್ರಮುಖ ವಿಚಾರಗಳು ಗೊತ್ತಾದವು. ಈ ಬಗ್ಗೆ ಇನ್ನಷ್ಟು ಇನ್ವಸ್ಟಿಗೇಷನ್ ನಡೆಸಿದಾಗ ಶ್ರೀರಾಮುಲು ಆರೋಗ್ಯ ಪಟ್ಟಕ್ಕೆ ಕುತ್ತಾದ ಕೆಲ ಸೀಕ್ರೆಟ್ಗಳು ಗೊತ್ತಾದವು. ಅವೇನು ಗೊತ್ತಾ? ಟೆಂಡರ್ ಗೋಲ್ ಮಾಲ್. ಯಸ್, ಸರ್ಕಾರ ಸೆಪ್ಟೆಂಬರ್ ೨೦ ರಂದು ೨೦೦೦ ಕೋಟಿಯ ಒಂದು ಟೆಂಡರ್ ಕರೆದಿದೆ.
ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದ ಟೆಂಡರ್ ಅದು. ಅದುವೇ ೧೦೮ ಆರೋಗ್ಯ ಕವಚ ಯೋಜನೆಯ ಆಂಬುಲೆನ್ಸ್ ನಿರ್ವಹಣಾ ಟೆಂಡರ್. ಆ ಟೆಂಡರಲ್ಲಿ ಆದ ಗೋಲ್ಮಾಲೇ ಇಷ್ಟೆಲ್ಲಾ ಬದಲಾವಣೆಗೆ ಕಾರಣ ಅನ್ನೋದೇ ಬಲವಾದ ಅನುಮಾನ.
೧೦೮ ಆರೋಗ್ಯ ಕವಚ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಜನರಿಗೆ ಉಚಿತವಾಗಿ ಆಂಬುಲೆನ್ಸ್ ಸೇವೆ ಕೊಟ್ಟು ಜನರ ಪ್ರಾಣ ರಕ್ಷಿಸಲಾಗುತ್ತೆ. ಈ ಯೋಜನೆಯನ್ನ ಜಿವಿಕೆ ಅನ್ನೋ ಖಾಸಗಿ ಸಂಸ್ಥೆ ಕಳೆದ ೧೨ ವರ್ಷಗಳಿಂದ ನಿರ್ವಹಿಸುತ್ತಿದೆ. ಟೆಂಡರ್ ಇಲ್ಲದೆಯೇ ೨ ವರ್ಷಗಳಿಂದ ಈ ಯೋಜನೆಯನ್ನ ನಡೆಸುತ್ತಿದೆ. ಆದ್ರೆ ಈ ೧೨ ವರ್ಷಗಳಲ್ಲಿ ಈ ಜಿವಿಕೆ ಹಾಗೂ ಆರೋಗ್ಯ ಅಧಿಕಾರಿಗಳು ಮಾಡಿದ ಭ್ರಷ್ಟಾಚಾರ ಒಂದಾ ಎರಡಾ….
ಕೊರೋನಾ ಕಾಲದಲ್ಲೂ ಜಿವಿಕೆ ಸಂಸ್ಥೆ ಅತ್ಯಂತ ಬೇಜವಾಬ್ದಾರಿಯುತವಾಗಿ ವರ್ತಿಸಿ, ಅನೇಕ ರೋಗಿಗಳ ಪ್ರಾಣಕ್ಕೆ ಕುತ್ತು ತಂದಿದೆ. ೧೦೮ ಆಂಬುಲೆನ್ಸ್ನಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಕನಿಷ್ಟ ಸಂಬಳ, ಕನಿಷ್ಟ ಸೌಲಭ್ಯವನ್ನೂ ಕೊಡದೆ ಹಿಂಸಿಸುತ್ತಿದೆ. ಇನ್ನು ಕೋವಿಡ್ ಕಾಲದ ಭತ್ಯೆಯನ್ನೂ ನುಂಗಿ ನೀರು ಕುಡಿದಿದೆ. ಇದು ಸರ್ಕಾರಕ್ಕೆ ತಪ್ಪು ಲೆಕ್ಕ ಕೊಟ್ಟು, ಬಿಲ್ಗೋಲ್ ಮಾಡಿ ಇಡೀ ಆರೋಗ್ಯ ಕವಚ ವ್ಯವಸ್ಥೆಯನ್ನೇ ಕುಲಗೆಡಿಸಿ ಬಿಟ್ಟಿದೆ.
ಭ್ರಷ್ಟ ಅಧಿಕಾರಿಗಳಿಗೆ ಭರ್ಜರಿ ಲಂಚಕೊಟ್ಟು ಸರ್ಕಾರ ಭಾರೀ ಮೋಸ ಮಾಡ್ತಿದೆ. ಇದೇ ಸಂಸ್ಥೆಗೇ ಮತ್ತೆ ಟೆಂಡರ್ ಕೊಡಬೇಕು ಅನ್ನೋ ನಿಟ್ಟಿನಲ್ಲಿ ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಇದನ್ನ ವಿರೋಧಿಸಿದ್ದೇ ರಾಮುಲು ಅವರಿಗೆ ಕುತ್ತಾಯಿತಾ?
ಈ ಬಗ್ಗೆ ಇನ್ನಷ್ಟು ತನಿಖೆ ಮಾಡ ಹೊರಟಾಗ ನಮಗೆ ಮತ್ತಷ್ಟು ಶಾಕಿಂಗ್ ನ್ಯೂಸ್ ಗೊತ್ತಾದವು.
೨೦೦೦ ಸಾವಿರ ಕೋಟಿಯ ಈ ಟೆಂಡರ್ ಗೋಲ್ಮಾಲಿಗಾಗಿ ಭಾರೀ ಪ್ರಮಾಣದ ಲಂಚ ಪಾವತಿಯಾಗಿದೆ. ಯಾರಿಗೆ ಪಾವತಿಯಾಗಿದೆ? ಈ ಟೆಂಡರ್ ಗೋಲ್ಮಾಲ್ನ ಕಿಂಗ್ಪಿನ್ ಅಧಿಕಾರಿ ಯಾರು? ಈ ಎಲ್ಲಾ ಮಾಹಿತಿಗಳು ಕವರ್ಸ್ಟೋರಿಗೆ ಲಭ್ಯವಾದವು. ಸರ್ಕಾರ ಆರೋಗ್ಯ ಕವಚ ಆಂಬುಲೆನ್ಸ್ ಸೇವೆಗೆ ೨೦ ಸೆಪ್ಟೆಂಬರ್ ೨೦೨೦ಕ್ಕೆ ಟೆಂಡರ್ ಕರೆದಿತ್ತು. ಇದರ ಪ್ರೀ ಬಿಡ್ ಮೀಟಿಂಗನ್ನು ಅಕ್ಟೋಬರ್ ೫ಕ್ಕೆ ನಿಗದಿ ಮಾಡಿತ್ತು.
ಆದ್ರೆ ಈಎಂಆರ್ಐ ಸೇವೆಯ ಉಪನಿರ್ದೇಶಕ ಡಾ.ಸ್ವತಂತ್ರ ಕುಮಾರ್ ಅವರು, ನಿರ್ದೇಶಕರ ಲೆಟರ್ ಹೆಡ್ ಬಳಸಿ ಆ ಮೀಟಿಂಗನ್ನ ಯಾವುದೇ ಪೂರ್ವ ಭಾವಿ ಸೂಚನೆಯನ್ನು ಪ್ರಕಟಿಸದೆ ಅಕ್ಕೋಬರ್ ೫ ಬದಲು ಸೆಪ್ಟೆಂಬರ್ ೩೦ಕ್ಕೆ ಹಿಂದೂಡಿದ್ದಾರೆ. ಇದು ಟೆಂಡರ್ ನಿಯಮದ ಉಲ್ಲಂಘನೆಯಾಗಿದೆ.ನಿಯಮದ ಪ್ರಕಾರ ಪ್ರೀ ಬಿಡ್ ಮೀಟಿಂಗನ್ನು ಬದಲಾಯಿಸುವುದಾದ್ರೆ ಮೋದಲೇ ಸೂಚನೆ ನೀಡಿ ಅಕ್ಟೋಬರ್ ೫ ರ ನಂತರದ ದಿನಾಂಕವನ್ನು ನಿಗದಿಪಡಿಸಬೇಕು.
ಆದ್ರೆ ಈಎಂಆರ್ಐ ಸೇವೆಯ ಉಪನಿರ್ದೇಶಕ ಡಾ.ಸ್ವತಂತ್ರ ಕುಮಾರ್ ಅವರು, ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಅವರ ಲೆಟರ್ ಹೆಡ್ಅನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ ನಿರ್ದೇಶಕರ ಈ ಪ್ರೋಕ್ಯುರ್ಮೆಂಟ್ ಕೀಯ ದುರ್ಬಳಕೆಯೂ ಆಗಿದೆ. ಇದು ಕ್ರಿಮಿನಲ್ ಅಪರಾಧ ಆಗುತ್ತೆ. ಅಲ್ಲದೆ ಕೆಟಿಪಿಪಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಅಲ್ಲದೆ ಪ್ರೀ ಪೋನ್ ಆಗಿರೋ ದಿನಾಂಕದ ಸೂಚನೆಯನ್ನು ಹತ್ತು ದಿನಗಳ ಬಳಿಕ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ಇದರ ಹಿಂದಿನ ಉದ್ದೇಶ ಸ್ಪಷ್ಟ.
ಇತರೆ ಟೆಂಡರುದಾರರನ್ನು ಅವಕಾಶದಿಂದ ವಂಚಿರನ್ನಾಗಿಸುವುದು. ಅಲ್ಲದೆ ಈ ಟೆಂಡರ್ನಲ್ಲಿ ತಮಗೆ ಬೇಕಾದವರಲ್ಲದೆ ಬೇರೆ ಯಾರೂ ಭಾಗವಹಿಸಬಾರದು, ಸ್ಪರ್ಧೆ ಏರ್ಪಡಬಾರದು ಅನ್ನೋ ಹುನ್ನಾರ. ಈ ಟೆಂಡರ್ ಮತ್ತೆ ಜಿವಿಕೆಗೆ ಸಿಗಲು ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಭರ್ಜರಿ ಲಂಚ ಪಡೆದು ಶತ ಪ್ರಯತ್ನ ಪಡುತ್ತಿದ್ದಾರೆ.
ಈ ಟೆಂಡರ್ ಬಗ್ಗೆ ಬಗ್ಗೆ ಸಾಕಷ್ಟು ಗೊಂದಲಗಳಿವೆ, ಕಾಯ್ದೆಗಳ ಉಲ್ಲಂಘನೆಯಾಗಿವೆ, ಷಡ್ಯಂತ್ರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಈ ಸಂಸ್ಥೆ ವಿರುದ್ಧ ಇದ್ದ ಸಚಿವರೇ ಮಂತ್ರಿ ಪಟ್ಟ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ಆಗಿರೋದು ಸ್ಪಷ್ಟ. ಈ ಬಗ್ಗೆ ತನಿಖೆ ಆಗಲೇ ಬೇಕು.