ಬೆಂಗಳೂರು, ಫೆ. 06: ದೇವರು ಆ ತಂದೆ, ತಾಯಿಗೆ ಮಗುವನ್ನು ಕೊಟ್ಟ ಆದರೆ, ಅದರ ನಗುವನ್ನು ಕಿತ್ತುಕೊಂಡ. ಸಿರಾ ತಾಲೂಕಿನ ಸಂಜೀವಿನಿ ನಗರದ ನಿವಾಸಿಗಳಾದ ನವೀನ್ ಕುಮಾರ್ ಮತ್ತು ಜ್ಯೋತಿ ದಂಪತಿ ಪುತ್ರ 11 ತಿಂಗಳ ಜನೀಶ್ಗೆ ಬಂದ ಕಾಯಿಲೆಯನ್ನು ಗುಣಪಡಿಸಲು 16 ಕೋಟಿಯ ಅವಶ್ಯಕತೆ ಇದೆ. ಈ ಮಗುವಿಗೆ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆ ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎನ್ನುವ ಕಾಯಿಲೆ ಕಾಣಿಸಿಕೊಂಡಿದೆ. ಈ ಸಮಸ್ಯೆಯಿಂದ ಪಾರಾಗಲು ಅಮೇರಿಕಾದಲ್ಲಿ ಲಭಿಸುವ 16 ಕೋಟಿಯ ಔಷಧಿಯ ಅಗತ್ಯತೆ ಇದೆ. ಅಷ್ಟೊಂದು ಹಣವನ್ನು ಎಲ್ಲಿಂದ ಒಗ್ಗೂಡಿಸುವುದು ಎನ್ನುವುದು ಪೋಷಕರ ತಲೆನೋವಾಗಿ ಪರಿಣಮಿಸಿದೆ.
ಆದ್ದರಿಂದ ತಮ್ಮ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದು, ಸಹಾಯಹಸ್ತಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಇದು ತುಂಬಾ ಅಪರೂಪದ ಸಮಸ್ಯೆಯಾಗಿದ್ದು, ಅನುವಂಶೀಯ ಕಾಯಿಲೆಯಾಗಿದೆ ಎಂದು ತಿಳಿದು ಬಂದಿದೆ. ಮಗುವಿನ ಪ್ರಾಣ ಉಳಿಸಲು ಹಣದ ಅವಶ್ಯಕತೆ ಇದೆ ಎಂದು ತಮ್ಮ ಖಾತೆ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.