ಮಧ್ಯಪ್ರದೇಶ, ಜು. 16: ಬಾವಿಗೆ ಬಿದ್ದ ಹುಡುಗನೊಬ್ಬ ರಕ್ಷಣಾ ಕಾರ್ಯವನ್ನು ಅಡ್ಡಗೋಡೆಯ ಸುತ್ತಲೂ ನಿಂತು ನೋಡುತ್ತಿದ್ದ ಗ್ರಾಮಸ್ಥರೆಲ್ಲ ಅದರೊಳಗೆ ಬಿದ್ದ ಘಟನೆ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ಸಂಭವಿಸಿದೆ.
ಗುರುವಾರ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದ ಗಂಜ್ ಬಸೊಡಾ ಎಂಬಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. 19 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾವಿಯ ಸುತ್ತಲು ಕಟ್ಟಿದ್ದ ಅಡ್ಡಗೋಡೆ ಕುಸಿದಿದ್ದರಿಂದ ಈ ದುರ್ಘಟನೆ ನಡೆದಿದೆ. ಸುಮಾರು 20 ಅಡಿ ನೀರು ತುಂಬಿದ್ದ, ಒಟ್ಟು 50 ಅಡಿ ಆಳದ ಬಾವಿಯಲ್ಲಿ ಹುಡುಗನ ರಕ್ಷಣಾ ಕಾರ್ಯವನ್ನು ಗ್ರಾಮಸ್ಥರು ನೋಡುತ್ತಿದ್ದರು. ಈ ಸಂದರ್ಭ ಇಣುಕುತ್ತಿದ್ದವರ ಭಾರ ಹೆಚ್ಚಾಗಿ ಅಡ್ಡಗೋಡೆ ಕುಸಿದಿರಬಹುದು ಎನ್ನಲಾಗಿದೆ.
ಘಟನೆ ಕುರಿತು ಕಳವಳ ವ್ಯಕ್ತ ಪಡಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಮತ್ತು ಚಿಕಿತ್ಸಾ ವೆಚ್ಛ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.