ಮಡಿಕೇರಿ, ಜೂ.19: ಸಾಂಕ್ರಾಮಿಕ ಸೋಂಕಿನ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಹೆಚ್ಚಾಗಿ ಕೊರೊನಾ ಸೋಂಕಿಗೆ ಒಳಗಾಗಲಿದ್ದಾರೆ ಎಂಬ ಆತಂಕವಿದೆ. ಈ ಹಿನ್ನೆಲೆ ದೇಶಾದ್ಯಂತ, ತಜ್ಞರು ಮತ್ತು ಸರ್ಕಾರವು ಕೋವಿಡ್ -19 ರ ಸೋಂಕಿನಿಂದ ಮಕ್ಕಳನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಚರ್ಚಿಸುತ್ತಿದೆ. ಆದರೆ ಈಗಾಗಲೇ ದೇಶದಾದ್ಯಂತ ಸಾವಿರಾರು ಮಕ್ಕಳು ಕೋವಿಡ್ ಕಾರಣದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಸಾಂಕ್ರಾಮಿಕ ರೋಗವು ಈಗಾಗಲೇ ಕರ್ನಾಟಕದಾದ್ಯಂತ ನೂರಾರು ಮಕ್ಕಳ ಬಾಲ್ಯದ ಮೇಲೆ ಭಾರಿ ಪರಿಣಾಮವನ್ನುಂಟು ಮಾಡಿದೆ. ಕೋವಿಡ್ ಸೋಂಕಿನ ಕಾರಣದಿಂದಾಗಿ ರಾಜ್ಯಾದ್ಯಂತ 48 ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ನೂರಾರು ಮಂದಿ ಕೊರೊನಾ ಕಾರಣದಿಂದಾಗಿ ತಮ್ಮ ಓರ್ವ ಪೋಷಕರನ್ನು ಕಳೆದುಕೊಂಡಿದ್ದಾರೆ.
”ಕೊಡಗಿನ ಗುಡ್ಡಗಾಡು ಜಿಲ್ಲೆಯಲ್ಲಿ, ಮೂರು ಮಕ್ಕಳು ಕೋವಿಡ್ ಪರಿಣಾಮ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನೂ 35 ಮಕ್ಕಳ ಪೋಷಕರ ಪೈಕಿ ತಂದೆ ಅಥವಾ ತಾಯಿ, ಒಬ್ಬರು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾರಂಭಿಸಿದ ‘ಬಾಲ ಸೇವಾ’ ಯೋಜನೆಯಡಿ ಇಲಾಖೆ ಈ ಅನಾಥ ಮಕ್ಕಳನ್ನು ತಲುಪುತ್ತಿದೆ,” ಎಂದು ಕರ್ನಾಟಕ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಶುಕ್ರವಾರ ಹೇಳಿದ್ದಾರೆ.
ಕೋವಿಡ್ -19 ರ ನಿರೀಕ್ಷಿತ ಮೂರನೇ ಅಲೆಗಿಂತ ಮುಂಚಿತವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚಿಸಲು ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಶಶಿಕಲಾ, ಪ್ರತಿ ತಾಲೂಕಿನಲ್ಲಿ ಮಕ್ಕಳಿಗಾಗಿ ಮೀಸಲಾದ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಗುವಂತೆ ನೋಡಿಕೊಳ್ಳಲು ಕೊಡಗಿನ ತನ್ನ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಗತ್ಯವಾದ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
”ಕೊಡಗಿನಲ್ಲಿ 2,380 ಮಕ್ಕಳು ಎರಡನೇ ಅಲೆಯ ಸಂದರ್ಭ ಸೋಂಕಿನ ಪರಿಣಾಮಕ್ಕೆ ಒಳಗಾಗಿದ್ದಾರೆ. ಈ ಪೈಕಿ 16 ಮಂದಿ ಹೊರತುಪಡಿಸಿ ಉಳಿದವರೆಲ್ಲರೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರ,” ಎಂದು ಹೇಳಿದ ಸಚಿವೆ, ಅನಾಥ ಮಕ್ಕಳ ಸುಧಾರಣೆಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು. ಈ ಮಕ್ಕಳನ್ನು ದತ್ತು ಪಡೆಯಲು ಆಸಕ್ತಿ ಹೊಂದಿರುವವರಿಗೆ ಇಲಾಖೆಯಿಂದ ಎಲ್ಲಾ ಕಾನೂನು ಬೆಂಬಲವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.