- ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ
- ಯಾವುದೇ ಹೊಸ ನಿರ್ಮಾಣವಿಲ್ಲ ಹಸಿರು ಉಳಿಸುವತ್ತ, ಜನಸಾಮಾನ್ಯರ ಪಾಲ್ಗೊಳ್ಳುವತ್ತ ಸರ್ಕಾರದ ನೋಟ
- ಸಿಸಿಟಿವಿ ಅಳವಡಿಕೆ, ಸಾಂಸ್ಕೃತಿಕ ವೇದಿಕೆ ನಿರ್ಮಾಣ ಮತ್ತು ಮರಗಳ ಸಂರಕ್ಷಣೆ ಪ್ರಥಮ ಆದ್ಯತೆ

Bengaluru: ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಪ್ರಸಿದ್ಧ ಕಬ್ಬನ್ ಪಾರ್ಕ್(Cubbon Park)ಪುನಶ್ಚೇತನಕ್ಕಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (D.K. Shivakumar)ಭರ್ಜರಿ ಘೋಷಣೆ ಮಾಡಿದ್ದಾರೆ. (5 crore for development of Cubbon Park)
ಭಾನುವಾರ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ವೇಳೆ, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ರೂ.
ಅನುದಾನವನ್ನು ನೀಡುವುದಾಗಿ ಅವರು ಪ್ರಕಟಿಸಿದರು.ಶಿವಕುಮಾರ್ ಅವರು ಕಬ್ಬನ್ ಪಾರ್ಕ್ ಹಾಗೂ ಲಾಲ್ಬಾಗ್ (Lalbagh) ಎರಡನ್ನೂ “ಬೆಂಗಳೂರಿನ ಅವಳಿ ಶ್ವಾಸಕೋಶಗಳು” ಎಂದು ವರ್ಣಿಸಿ, ನಗರದಲ್ಲಿ ಹಸಿರು ಉಳಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಕಬ್ಬನ್ ಪಾರ್ಕ್ನ ನೈಸರ್ಗಿಕ ಸೌಂದರ್ಯ, ಪರಿಸರ ಸಮತೋಲನ ಹಾಗೂ ಸಾರ್ವಜನಿಕರಿಗೆ ವಿಶ್ರಾಂತಿಯ ಸ್ಥಳ ಎಂಬ ಅಂಶಗಳನ್ನು ಕಾಪಾಡಿಕೊಂಡೇ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರದೇಶದ ಮೂಲ ಹಸಿರು ಸ್ವರೂಪಕ್ಕೆ ಯಾವುದೇ ಹಾನಿಯಾಗಬಾರದು. ಉದ್ಯಾನವನದ ಆಕರ್ಷಕತೆ ಮತ್ತು ಪರಿಸರದ ಸಮತೋಲನ ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.(5 crore for development of Cubbon Park)
ಅವರು ತೋಟಗಾರಿಕೆ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)(BDA) ಸಹಯೋಗದೊಂದಿಗೆ ಪಾರ್ಕ್ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ ಮಾದರಿಯಲ್ಲಿ ನಗರದ ಇತರ ಭಾಗಗಳಲ್ಲಿಯೂ “ಟ್ರೀ ಪಾರ್ಕ್”ಗಳನ್ನು ಸ್ಥಾಪಿಸುವ ಯೋಜನೆಯನ್ನೂ ಪ್ರಕಟಿಸಿದರು.
ಹಸಿರು ಪ್ರದೇಶಗಳನ್ನು ವಿಸ್ತರಿಸಲು ಮರಗಳನ್ನು ಕಡಿಯುವ ಅಗತ್ಯವಿಲ್ಲ, ಬದಲಿಗೆ ನವೀಕರಿಸಿದ ರೀತಿಯಲ್ಲಿ ವಿಸ್ತರಣೆ ಮಾಡಬಹುದು, ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಉದ್ಯಾನವನದ ಸುರಕ್ಷತೆ ಮತ್ತು ಶಿಸ್ತಿನ ದೃಷ್ಟಿಯಿಂದ ಕಬ್ಬನ್ ಪಾರ್ಕ್ನಾದ್ಯಂತ ಸಿಸಿಟಿವಿ ಕ್ಯಾಮೆರಾ (CCTV Camera)ಗಳನ್ನು ಅಳವಡಿಸಲಾಗುವುದು ಎಂದು ಶಿವಕುಮಾರ್ ಘೋಷಿಸಿದರು.
ಈ ಕ್ಯಾಮೆರಾಗಳನ್ನು ನೇರವಾಗಿ ಆಯುಕ್ತರ ಕಚೇರಿಯ ನಿಗಾವ್ಯವಸ್ಥೆಗೆ ಸಂಪರ್ಕಿಸಲಾಗುವುದು. ಅದರಿಂದಾಗಿ ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆಯಿಂದ ಸುರಕ್ಷತೆ ಸುಧಾರಣೆಯಾಗುತ್ತದೆ.
330 ಎಕರೆಯಷ್ಟು ವ್ಯಾಪ್ತಿಯಿದ್ದ ಕಬ್ಬನ್ ಪಾರ್ಕ್ ಈಗ 196 ಎಕರೆಯಷ್ಟೇ ಉಳಿದಿದೆ. ಅತಿಕ್ರಮಣ ಮತ್ತು ಸುತ್ತಮುತ್ತಲಿನ ಅಭಿವೃದ್ಧಿ ಚಟುವಟಿಕೆಗಳಿಂದ ಉದ್ಯಾನವನದ ಪ್ರದೇಶ ಸೀಮಿತವಾಗುತ್ತಿದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ಭರವಸೆ ನೀಡಿದರು.
ಕಬ್ಬನ್ ಪಾರ್ಕ್ ಆವರಣದಲ್ಲಿರುವ ಕರ್ನಾಟಕ ಹೈಕೋರ್ಟ್(High Court of Karnataka) ಕಟ್ಟಡ ಸ್ಥಳಾಂತರದ ಕುರಿತು ನಡೆಯುತ್ತಿರುವ ಚರ್ಚೆಯನ್ನೂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿ ಹೈಕೋರ್ಟ್ ಕಟ್ಟಡವನ್ನು ರೇಸ್ ಕೋರ್ಸ್ ಪ್ರದೇಶಕ್ಕೆ ಸ್ಥಳಾಂತರಿಸಲು ಕೆಲವರಿಂದ ಸಲಹೆ ಬಂದಿದೆ.
ಆದರೆ ಇದು ಕಾನೂನು ಮತ್ತು ಆಡಳಿತಾತ್ಮಕ ಅಡಚಣೆಗಳೊಂದಿಗೆ ಬರುವ ವಿಷಯವಾಗಿದೆ. ಹೈಕೋರ್ಟ್ ಐತಿಹಾಸಿಕ ಕಟ್ಟಡವಾಗಿರುವುದರಿಂದ, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ನ್ಯಾಯಾಂಗದೊಂದಿಗೆ ಸಮಾಲೋಚನೆ ಅಗತ್ಯ ಎಂದು ಹೇಳಿದ್ದಾರೆ.