ನವದೆಹಲಿ, ಫೆ. 01: ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬೆನ್ನಲ್ಲೇ ತೆರಿಗೆ ಸಂಗ್ರಹದ ಉದ್ದೇಶದಿಂದಾಗಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ಪೆಟ್ರೋಲ್ ಮೇಲೆ 2.50 ರೂ ಹಾಗೂ ಡೀಸೆಲ್ ಮೇಲೆ ಬರೋಬ್ಬರಿ 4 ರೂಪಾಯಿಯನ್ನು ಏರಿಸಿದೆ. ಈ ದರಗಳು ಇಂದು ಮಧ್ಯರಾತ್ರಿಯಿಂದ ಜಾರಿಯಾಗಲಿದ್ದು, ಈ ಮೂಲಕ ಮಧ್ಯಮ ವರ್ಗದ ಜನರ ಉಳಿತಾಯಕ್ಕೆ ಸರ್ಕಾರ ಭಾರಿ ಹೊಡೆತ ನೀಡಿದೆ. ಕಳೆದ ಕೆಲ ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ. ಆದರೆ, ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದ ಕಾರಣ ಜನ ಸಾಮಾನ್ಯರು ಅಸಮಾಧಾನವಿದ್ದರೂ ತೋರಿಸಿಕೊಂಡಿರಲಿಲ್ಲ. ಆದರೆ, ಈ ಬಜೆಟ್ನಲ್ಲಿ ಏಕಾಏಕಿ ರೂಪಾಯಿ ಲೆಕ್ಕದಲ್ಲಿ ತೈಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದಾದ್ಯಂತ ತೈಲದ ಬೆಲೆ 1 ಲೀಟರ್ಗೆ 92 ರೂ ಗಿಂತ ಅಧಿಕವಾಗಿದೆ. ಇನ್ನೂ ದೆಹಲಿ ಮುಂಬೈನಲ್ಲಿ ಈ ಬೆಲೆ ಮತ್ತಷ್ಟು ಅಧಿಕವಾಗಲಿದೆ. ಆರ್ಥಿಕ ತಜ್ಞರು ಇದು ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ನೀಡಿದ ಮರ್ಮಾಘಾತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಎರಡನೇ ಪೂರ್ಣಾವಧಿ ಕೇಂದ್ರ ಯುನಿಯನ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ನಲ್ಲಿ ಕೃಷಿ ವಲಯಕ್ಕೆ 2 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ಹೀಗಾಗಿ ಕೃಷಿ ವಲಯದ ಖರ್ಚಿಗೆ ಹಣವನ್ನು ಕ್ರೋಢೀಕರಣ ಮಾಡುವ ಕಾರಣಕ್ಕೆ “ಕೃಷಿ ಸೆಸ್” ಹೆಸರಿನಲ್ಲಿ ಕೇಂದ್ರ ಸರ್ಕಾರ ಇದೀಗ ತೈಲ ಬೆಲೆಯನ್ನು ಏರಿಕೆ ಮಾಡಲು ಮುಂದಾಗಿದೆ.
ಕೇಂದ್ರ ಸರ್ಕಾರ ತೈಲ ಬೆಲೆಯನ್ನು ನಿರ್ಧರಿಸುವ ಹಕ್ಕನ್ನು ಈಗಾಗಲೇ ಆಯಾ ಖಾಸಗಿ ಕಂಪೆನಿಗೆ ನೀಡಿದೆ. ಹೀಗಾಗಿ ಈ ಕಂಪೆನಿಗಳು ಪ್ರತಿನಿತ್ಯ ತೈಲ ದರ ಏರಿಸುತ್ತಲೇ ಇದೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರದಲ್ಲಿ ತೈಲಗಳ ಬೆಲೆ ಶೇ.70 ರಷ್ಟು ಕುಸಿದಿತ್ತು. ಆದರೆ, ಈ ಸಂದರ್ಭದಲ್ಲೂ ಸಹ ಈ ಕಂಪೆನಿಗಳು ಭಾರತದಲ್ಲಿ 12 ರೂ ಗಿಂತ ಅಧಿಕ ಬೆಲೆ ಏರಿಕೆ ಮಾಡಿದ್ದವು. ಈ ಮೂಲಕ ತೈಲ ಬೆಲೆ ಇಳಿಕೆಯ ಲಾಭವನ್ನು ಜನರಿಗೆ ನೀಡದೆ ಮತ್ತಷ್ಟು ಹೊರ ನೀಡಲಾಗಿತ್ತು.
ಈ ನಡುವೆ ಕೇಂದ್ರ ಸರ್ಕಾರ ಇದೀಗ ಮತ್ತೆ ತೈಲದ ಮೇಲಿನ ಸೆಸ್ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಜರಿಗೆ ಮತ್ತಷ್ಟು ಹೊರೆ ನೀಡಿದೆ. ಈ ಮೂಲಕ ದಿನ ನಿತ್ಯದ ಬೆಲೆಯೂ ಏರಿಕೆಯಾಗಲಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಲಿದೆ ಎನ್ನಲಾಗುತ್ತಿದೆ.