ಬೆಂಗಳೂರು, ಮಾ. 22: ಸಾರಿಗೆ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ತಲಪಾಡಿ ಬಳಿ ಈ ಘಟನೆ ನಡೆದಿದ್ದು, ಬಸ್-ಸ್ಕೂಟರ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಉದ್ಯಾವರ ನಿವಾಸಿ ತುಳಸಿ ಎಂದು ಗುರುತಿಸಲಾಗಿದೆ. ತುಳಸಿ ತಲಪಾಡಿಯಲ್ಲಿ ಟೈರ್ ಅಂಗಡಿಯೊಂದನ್ನು ನಡೆಸುತ್ತಿದ್ದು ಸೋಮವಾರ ಅಂಗಡಿಗೆ ತೆರಳುತ್ತಿದ್ದ ವೇಳೆ ಈ ಅನಾಹುತ ನಡೆದಿದೆ.
ರೋಡ್ ಡಿವೈಡರ್ ಮಧ್ಯೆ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಕ್ಕಿ ಹೊಡೆದಿದೆ. ಈ ಬಸ್ ಮಂಗಳೂರಿನಿಂದ ಕಾಸರಗೋಡು ಕಡೆಗೆ ಚಲಿಸುತ್ತಿತ್ತು. ಅಪಘಾತದ ರಭಸಕ್ಕೆ ಸ್ಕೂಟರ್ ಬಸ್ಸಿನಡಿಗೆ ಬಿದ್ದು ನಜ್ಜುಗೊಜ್ಜಾಗಿದೆ. ಈ ಬಗ್ಗೆ ನಾಗೂರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.