ಕೊಡಗು, ಏ. 27: ಕೊಡಗು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಡಿಕೇರಿಯ ಅಧಿಕಾರಿ ಸಂಪತ್ ಎಸಿಬಿ ಬಲೆಗೆ ಬಿದ್ದ ಆರೋಪಿ. ದಿವ್ಯಾಂಗರಿಗೆ ವಾಹನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. 12,000 ರೂ.ಗೆ ಬೇಡಿಕೆಯಿಟ್ಟಿದ್ದ ಅಧಿಕಾರಿ ಸಂಪತ್ 3 ಸಾವಿರ ರೂ. ಮುಂಗಡ ಹಣ ಪಡೆದುಕೊಂಡಿದ್ದ.
ಸೋಮವಾರ ಬೇಡಿಕೆಯಂತೆ ಕಚೇರಿಗೆ ಅಂಗವಿಕಲ ಯುವತಿ ಹಣ ನೀಡುತ್ತಿದ್ದಾಗ ಆಕೆಯ ದೂರಿನ ಆಧಾರದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಎಸಿಬಿ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕ ಅರುಣ್ ಮಾರ್ಗದರ್ಶನದಲ್ಲಿ ಕೊಡಗು ಎಸಿಬಿಯ ಪ್ರಭಾರ ಉಪಾಧೀಕ್ಷಕ ಎ.ಸದಾನಂದ ತಿಪ್ಪಣ್ಣನವರ, ಪೊಲೀಸ್ ನಿರೀಕ್ಷಕ ಎನ್.ಪಿ.ಹರೀಶ್, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.