ಬೆಂಗಳೂರು, ಜು. 21: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಅವರನ್ನು ಚಿತ್ರರಂಗದಿಂದ ಐದು ವರ್ಷ ಬಹಿಷ್ಕರಿಸುವ ವಿಷಯಕ್ಕೆ ನಟ ನೆನಪಿರಲಿ ಪ್ರೇಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೆಲ ವಿಷಯಗಳ ಕುರಿತು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿರುವ ನಟ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಅವರನ್ನ ಚಿತ್ರರಂಗದಿಂದ 5 ವರ್ಷ ಬಹಿಷ್ಕರಿಸುವಂತೆ ಕೋರಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದೆ.
ಆದರೆ ಇದನ್ನು ವಿರೋಧಿಸಿರುವ ಲವ್ಲಿ ಸ್ಟಾರ್ ಪ್ರೇಮ್, ದರ್ಶನ್ ಭಾಯ್ ಜಾನ್ ನೀವು ಕನ್ನಡ ಚಿತ್ರರಂಗದ ಆಸ್ತಿ. ನೀವು ತಪ್ಪು ಮಾಡಿದ್ದರೆ ಹಿರಿಯರಿಂದ ನಿಮ್ಮ ತಪ್ಪನ್ನು ತಿದ್ದುವ ಪ್ರಯತ್ನವಾಗಲಿ, ಆದರೆ ನಿಮ್ಮನ್ನು ಚಿತ್ರರಂಗದಿಂದ ಬಹಿಷ್ಕರಿಸುವ ಹಕ್ಕು ಯಾರಿಗೂ ಇಲ್ಲ.. ನಿಮ್ಮ ಜೊತೆ ಒಬ್ಬ ಅಭಿಮಾನಿಯಾಗಿ, ಸ್ನೇಹಿತನಾಗಿ, ಸಹೋದರನಾಗಿ ನಾನಿದ್ದೇನೆ ಎಂದಿದ್ದಾರೆ.
ಇನ್ನೂ ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಸಹ ನಟ ದರ್ಶನ್ ಅವರಿಗೆ ಬೆಂಬಲ ನೀಡಿದ್ದಾರೆ. ದರ್ಶನ್ ಅವರ ಕುರಿತು ಟ್ವೀಟ್ ಮಾಡಿರುವ ರಕ್ಷಕ್, ಹಣ್ಣು ಇರುವ ಮರಕ್ಕೆ ಕಲ್ಲು ಹೊಡೆಯುತ್ತಾರೆ ಅನ್ನುವುದು ನಾಣ್ಣುಡಿ, D-BOSS ವಿರುದ್ಧ ಹೇಳಿಕೆ ನೀಡುವುದು ತುಂಬ ಸಾಮಾನ್ಯ ವಿಷಯವಾಗಿದೆ, ನಾನು ಹಾಗೂ ನನ್ನ ಕುಟುಂಬ ಅವರನ್ನು ಹತ್ತಿರದಿಂದ ನೋಡಿದ್ದೇವೆ, ನಾವು ಸದಾ D-BOSS ಜೊತೆಯಲ್ಲಿ ಇರುತ್ತೇವೆ ಎಂದಿದ್ದಾರೆ.