ಬೆಂಗಳೂರು ಅ 1 : ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸವಿ ಮಾದಪ್ಪ (ಸೌಜನ್ಯ) ತಂದೆ ಪ್ರಭು ಮಾದಪ್ಪ ಅವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪೊಲೀಸರು ತೆಲುಗು ನಟ ವಿವೇಕ್ ಹಾಗೂ ಈತನ ಪಿಎ ಮಹೇಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಗೋಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಪಿಎ ಮಹೇಶ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಇಬ್ಬರು ಅನುಮಾನಿತರ ವಿರುದ್ಧ ಕುಂಬಳಗೋಡು ಪೊಲೀಸರು ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಕೇಸ್ ದಾಖಲು ಮಾಡಿ, ದೂರಿನನ್ವಯ ವಿವೇಕ್ ನಂ.1 ಆರೋಪಿ ಹಾಗೂ ಮಹೇಶ್ ನಂ.2 ಆರೋಪಿಯಾಗಿದ್ದಾರೆ. ಮದುವೆ ಆಗದೇ ಹೋದರೆ ಕೊಲೆ ಮಾಡುವೆ ಎಂಧು ವಿವೇಕ್ ಬೆದರಿಕೆ ಹಾಕಿದ್ದರು ಎಂದು ಪ್ರಭು ಮಾದಪ್ಪ ದೂರಿನಲ್ಲಿ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಮಗಳು ಸೌಜನ್ಯ ಮಾದಪ್ಪ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಸಲುವಾಗಿ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು ಕಳೆದ ಒಂದು ವರ್ಷದಿಂದ ಅವರು ಕುಂಬಳಗೋಡು ಬಳಿಯ ಸನ್ನರ್ದ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು.
ಈ ವೇಳೆ ನನ್ನ ಮಗಳು ಸೌಜನ್ಯಳಿಗೆ ವಿವೇಕ್ ಎಂಬುವನ ಪರಿಚಯವಾಗಿತ್ತು. ವಿವೇಕ್ ನನ್ನ ಮಗಳನ್ನು ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಪೀಡಿಸುತ್ತಿದ್ದ. ಈ ವಿಚಾರವನ್ನು ಮಗಳು ಸೌಜನ್ಯ ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದರು.
ಸೆಪ್ಟೆಂಬರ್ 30ರಂದು ವಿವೇಕ್ ನನ್ನ ಪತ್ನಿ ರೇಣುಕಾಗೆ ಬೆಳಗ್ಗೆ 9ಕ್ಕೆ ಫೋನ್ ಮಾಡಿದ್ದ. ಇದಾದ ಒಂದು ಗಂಟೆ ನಂತರ ನನ್ನ ದೊಡ್ಡ ಮಗಳು ಭಾಗ್ಯಶ್ರೀ ಕರೆಮಾಡಿ, ಸವಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದ್ದಾಳೆ. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಅವಳ ಸಹಾಯಕನಾಗಿದ್ದ ಮಹೇಶ್ ಕಾರಣ. ನನ್ನ ಮಗಳ ಬಳಿ 6 ಲಕ್ಷ ರೂ. ಹಣವಿತ್ತು. ಎರಡು ದಿನಗಳ ಹಿಂದೆ 1 ಲಕ್ಷ ರೂ.ಗಳನ್ನು ಕಳುಹಿಸಿದ್ದೆ. ನನ್ನ ಮಗಳ ಜೊತೆಯಲ್ಲಿದ್ದ ವಿವೇಕ್ ಹಾಗೂ ಮಹೇಶ್ ಕಿರುಕುಳ ತಾಳಲಾರದೆ ಸೆಪ್ಟೆಂಬರ್ 30ರಂದು 10:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ವಿವೇಕ್ ಹಾಗೂ ಮಹೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಟಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಕುಂಬಳಗೋಡು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ನಡೆಸುತ್ತಿದ್ದಾರೆ.