Bengaluru: ಕಳೆದ ಕೆಲ ವರ್ಷಗಳ ಹಿಂದೆ ಅನಧಿಕೃತ ಜಾಹಿರಾತು, ಫ್ಲೆಕ್ಸ್, ಬ್ಯಾನರ್, ಕಟೌಟ್ (Flex, Banner, Cutout)ಗಳಿಗೆ ನಿಯಮ ರೂಪಿಸಿದ್ದ ಬಿಬಿಎಂಪಿ ಈಗ ಮತ್ತೊಮ್ಮೆ ಜಾಹಿರಾತು ನಿಯಮ ತಿದ್ದುಪಡಿ ಮಾಡಲು ಯೋಜನೆನಿರ್ಮಿಸಿದೆ. ಒಂದು ಸಮಯದಲ್ಲಿ ಬೆಂಗಳೂರನ್ನೇ ಆಳಿದ್ದ ಜಾಹೀರಾತು ಮಾಫಿಯಾಗೆ ಕಾಂಗ್ರೆಸ್ ಮತ್ತೆ ಮಣೆ ಹಾಕ ಹೊರಟಿದೆ. ಅನಧಿಕೃತ ಪ್ಲೇಕ್ಸ್ , ಬ್ಯಾನರ್ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಮತ್ತೆ ಜಾಹೀರಾತು ಮಾಫಿಯಗೆ ಹೊಸ ರೂಪ ಕೊಟ್ಟು ಮುಂದಿನ ವಾರ ಹೊಸ ನಿಯಮ ಜಾರಿಗೆ ತರುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಅನಧಿಕೃತವಾಗಿ ಮಾಡುವ ಜಾಹೀರಾತಿಗೆ ಕಡಿವಾಣ ಹಾಕಲು, ಗ್ಯಾರಂಟಿ ಯೋಜನೆಗೆ ಹಣ ಸರಿದೂಗಿಸಿ ಸರ್ಕಾರದ ಖಜಾನೆ ಭರ್ತಿ ಮಾಡಲು ಜಾಹೀರಾತು ನಿಯಮ ತಿದ್ದುಪಡಿ ಮಾಡಿ ಹೊಸ ಜಾಹೀರಾತು ನಿಯಮ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಹೊಸ ಯೋಜನೆ ಆರಂಭಿಸಿದೆ. ಶುಕ್ರವಾರದಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆದಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಕೆಲವೆ ದಿನಗಳಲ್ಲಿ ಹೊಸ ಜಾಹಿರಾತು ನಿಯಮ ಜಾರಿಗೆ ಬರಲಿದೆ.
ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು (Advertisement) ಪ್ರದರ್ಶನಕ್ಕೆ ಖಾಸಗಿಯವರಿಗೆ ಅನುಮತಿಸುವುದರಿಂದ ಬಿಬಿಎಂಪಿಯ ಆದಾಯ ಹೆಚ್ಚಾಗಲಿದೆ. ಈ ಹಿಂದೆ ಜಾಹೀರಾತು ಪ್ರದರ್ಶನ ನಿಷೇಧಿಸುವವರೆಗೆ ಬಿಬಿಎಂಪಿಗೆ ವಾರ್ಷಿಕ 40 ರಿಂದ 50 ಕೋಟಿ ರೂಪಾಯಿ ಮಾತ್ರ ಆದಾಯ ಬರುತ್ತಿತ್ತು.

ಅದಕ್ಕೆ ಪ್ರಮುಖ ಕಾರಣ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 8 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಹೋರ್ಡಿಂಗ್ಸ್ಗಳಲ್ಲಿ ಶೇ. 50 ಅಕ್ರಮ ಹಾಗೂ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಳ್ಳದೆ ಅನಧಿಕೃತವಾಗಿ ಹಾಕುವ ಜಾಹಿರಾತುಗಳಾಗಿದ್ದವು.
ಒಂದು ವೇಳೆ ಬಿಬಿಎಂಪಿ ಹೊಸ ಜಾಹೀರಾತು ನಿಯಮ ಜಾರಿಯಾದರೆ ಬಿಬಿಎಂಪಿಗೆ 1000 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ. ಹೊಸ ಜಾಹೀರಾತು ಕಾಯ್ದೆಯಲ್ಲಿ ಕೆಲ ಮಾನದಂಡಗಳು ಇದ್ದು 60 ಅಡಿ ರಸ್ತೆಗಳು ಹಾಗೂ ಕಮರ್ಷಿಯಲ್ ಜಾಗಗಳಲ್ಲಿ ಕೆಲವೆಡೆಗೆ ಜಾಹಿರಾತುಗೆ ಅವಕಾಶ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ತಿಳಿಸಿದ್ದಾರೆ.