- ಕರ್ನಾಟಕದಲ್ಲಿ ಹೊಸ ಡಿಜಿಟಲ್ ವ್ಯವಸ್ಥೆ ಆರಂಭ
- ಇನ್ಮುಂದೆ ಬರಲಿದೆ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ
- ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕರ್ನಾಟಕ ಸರ್ಕಾರಿ AI ದೂರು ವ್ಯವಸ್ಥೆ ಪ್ರಾರಂಭ
Bengaluru: ಮನೆ ಮುಂದಿರುವ ರಸ್ತೆಯ ಗುಂಡಿಗಳು, ನೀರು/ವಿದ್ಯುತ್ ಕಡಿತ, ಮಳೆಗೆ ಮರ ಬೀಳುವುದು ಅಥವಾ ಸರ್ಕಾರಿ ಯೋಜನೆಯ ಸೌಲಭ್ಯ ಸಿಗದೇ ತಲೆಕೆಡಿಸಿಕೊಳ್ಳಬೇಕಾದ ಸಂದರ್ಭ ಬಹಳ ಸಾಮಾನ್ಯ. (AI based complaint filing)
ಆದರೆ, ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಪಡೆಯಲು ಪತ್ರ ಬರೆಯುವುದು, ಸಂಬಂಧಪಟ್ಟ ಇಲಾಖೆಯನ್ನು ಹುಡುಕುವುದು, ಮಾಹಿತಿ ತುಂಬುವುದು ಸಾಮಾನ್ಯ ನಾಗರಿಕರಿಗೆ ದೊಡ್ಡ ಕಷ್ಟವಾಗುತ್ತಿತ್ತು.

ಈಗ ಈ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಹೊಸ ತಂತ್ರಜ್ಞಾನ ಪರಿಹಾರ ತರುತ್ತಿದೆ. (AI based complaint filing)
ಕರ್ನಾಟಕ ಇ-ಆಡಳಿತ ಕೇಂದ್ರ ಈಗ AI (ಕೃತಕ ಬುದ್ಧಿಮತ್ತೆ) ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದು, ಡಿಸೆಂಬರ್ ಒಳಗೆ ಸಾರ್ವಜನಿಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಈ ಹೊಸ ವ್ಯವಸ್ಥೆಯಿಂದ, ಯಾರು ಬೇಕಾದರೂ ಸರಳ ಮಾಹಿತಿಯನ್ನು ನೀಡಿದರೆ, ಸ್ವಯಂಚಾಲಿತವಾಗಿ ದೂರುಪತ್ರ ರಚನೆಯಾಗುತ್ತದೆ.
ಅಷ್ಟಕ್ಕೂ ಈ AI ವ್ಯವಸ್ಥೆ ಮನುಷ್ಯರ ಮಾತಿನ್ನು ಗ್ರಹಿಸಿ ಬರಹ ರೂಪಕ್ಕೆ ಪರಿವರ್ತಿಸಲು ಸಹ ಸಾಮರ್ಥ್ಯ ಹೊಂದಿರುತ್ತದೆ.
ಉದಾಹರಣೆಗೆ, ಮೂರು ದಿನಗಳಿಂದ ನೀರು ಬಂದಿರುವುದಿಲ್ಲ ,ಇಲಾಖೆಯಿಂದ ಹಣ ಬಂದಿಲ್ಲ,ರಸ್ತೆ ತುಂಬಾ ಹಾಳಾಗಿದೆ ಎಂಬಂತೆ ಪ್ರಮುಖ ಮಾಹಿತಿಯನ್ನು ಹೇಳುವಷ್ಟೇ ಸಾಕು; AI ಅದನ್ನು ಪೂರ್ಣ ದೂರು ಪತ್ರವಾಗಿ ತಯಾರಿಸುತ್ತದೆ.
ಜೊತೆಗೆ, ಯಾರಿಗೆ ಬರೆಯಬೇಕು, ಯಾವ ಇಲಾಖೆಗೆ ಕಳುಹಿಸಬೇಕು ಎಂಬ ಗೊಂದಲ ಕೂಡ ಇಲ್ಲ.
ಡೇಟಾ ವಿಶ್ಲೇಷಣೆ ಮೂಲಕ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗೆ ದೂರು ಕಳುಹಿಸುವ ಜವಾಬ್ದಾರಿಯನ್ನೇ AI ತೆಗೆದುಕೊಳ್ಳುತ್ತದೆ.
ಇದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುತ್ತದೆ.ಪ್ರಸ್ತುತ iPGRS ಎನ್ನುವ ಸಾರ್ವಜನಿಕ ದೂರು ವ್ಯವಸ್ಥೆ ಇದ್ದರೂ, ಅಲ್ಲಿ ಜನರು ಇಲಾಖೆಯನ್ನು ಸ್ವತಃ ಆಯ್ಕೆಮಾಡಬೇಕು, ವಿವರಗಳನ್ನು ಟೈಪ್ ಮಾಡಬೇಕು.
ಆದರೆ ಹೊಸ AI ವ್ಯವಸ್ಥೆಯಲ್ಲಿ ಧ್ವನಿ ದಾಖಲಿಸಿ, ಚಿತ್ರಗಳು ಅಥವಾ ದಾಖಲೆಗಳನ್ನು ಕಳುಹಿಸುವುದರಿಂದಲೇ ಪ್ರಕ್ರಿಯೆ ಪೂರ್ಣ.
ChatGPT ತಂತ್ರಜ್ಞಾನ ಬಳಸಿ ಪತ್ರವನ್ನು ತಯಾರಿಸುವುದು ವಿಶೇಷ. ದೂರು ಸಲ್ಲಿಸಿದ ತಕ್ಷಣ, ದೂರು ID ಉತ್ಪಾದನೆ ಆಗಿ ನಾಗರಿಕರ ಫೋನ್ ಸಂಖ್ಯೆಗೆ ಸಂದೇಶ ಬರುತ್ತದೆ.
ನಂತರ ಕೆಲಸ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಾಗರಿಕರು ಟ್ರ್ಯಾಕ್ (Track) ಮಾಡಬಹುದಾಗಿದೆ.
ಈ ಅತ್ಯಾಧುನಿಕ ವೈಶಿಷ್ಟ್ಯದ ಮತ್ತೊಂದು ದೊಡ್ಡ ಲಾಭವೆಂದರೆ ಸಮಯ ಪಾಲನೆ.
ಒಂದು ದೂರು ಏಳು ದಿನಗಳಲ್ಲಿ ಪರಿಹಾರವಾಗದಿದ್ದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ಮೇಲಿನ ಹುದ್ದೆಯ ಅಧಿಕಾರಿಗೆ ವಿಷಯ ಕಳುಹಿಸುತ್ತದೆ.
ಮತ್ತೆ ಮುಂದಿನ ಏಳು ದಿನವೂ ಪರಿಹಾರವಾಗದಿದ್ದರೆ ಇಲಾಖೆಯ ಮುಖ್ಯಸ್ಥರಿಗೆ ತಲುಪುತ್ತದೆ. ಗರಿಷ್ಠ 21 ದಿನಗಳೊಳಗೆ ಸಮಸ್ಯೆ ಪರಿಹಾರವಾಗಲೇಬೇಕು.
ಈಗಾಗಲೇ ಸಿಸ್ಟಮ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಅಧಿಕೃತವಾಗಿ ಭಳಿಗೊಳ್ಳಲಿದ್ದು, ನಾಗರಿಕರು ಪತ್ರ ಬರೆಯುವ ತೊಂದರೆ, ಅಧಿಕಾರಿಗಳ ಕೈಯಲ್ಲಿ ಸುತ್ತಾಡುವ ತೊಂದರೆ ಎಲ್ಲವೂ ಕಡಿಮೆಯಾಗಲಿದೆ.
ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸೇವೆಯ ಉತ್ತಮ ಉದಾಹರಣೆಯಾಗಿ ಕರ್ನಾಟಕವು ಮತ್ತೊಮ್ಮೆ ಗುರುತಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಆರ್ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: 4 ಸಾವಿರ ಖಾಸಗಿ ಬಸ್ ತಪಾಸಣೆ, 102 ಬಸ್ ಸೀಜ್, 1 ಕೋಟಿ ದಂಡ