ಮೊನ್ನೆಯಷ್ಟೇ ಉತ್ತರ ಪ್ರದೇಶದ ಯುವ ದಲಿತ ಸಂಘದ ನಾಯಕ ಚಂದ್ರಶೇಖರ್ ಅಜಾದ್ ರಾವಣ್ ಬಿಜೆಪಿಯ ಯೋಗಿ ಆದಿತ್ಯನಾಥ್ ಅವರ ವಿರುದ್ಧ ತೊಡೆತಟ್ಟಿ ಚುನಾವಣೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಈಗ ಅಖಿಲೇಶ್ ಯಾದವ್ ಚಿಕ್ಕಪ್ಪ, ರಾಜ್ಯಸಭಾ ಸಂಸದರಾದ ರಾಮ್ ಗೋಪಾಲ್ ಯಾದವ್ ವಿಧಾನಸಭೆ ಚುನಾವಣೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಅಖಾಡದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ತಮ್ಮ ಊರಾದ ಭದ್ರ ಕೋಟೆ, ಮೈನ್ಪುರಿ ಜಿಲ್ಲೆಯ, ಕರ್ಹಾಲ್ನಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಈ ಕುರಿತಾಗಿ ಅಖಿಲೇಶ್ ಚಿಕ್ಕಪ್ಪ ರಾಜ್ಯಸಭಾ ಸಂಸದರಾದ ರಾಮ್ ಗೋಪಾಲ್ ಯಾದವ್ ಪ್ರತಿಕ್ರಿಯೆ ನೀಡಿದ್ದು, ಅಖಿಲೇಶ್ ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರಬಹುದು, ಆದರೆ ಖಂಡಿತವಾಗಿ ದಾಖಲೆ ಮತಗಳನ್ನು ಮೀರಿ ಭಾರಿ ಅಂತರದಿಂದ ಜಯಭೇರಿಯಾಗಲಿದ್ದಾರೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೆ ಮುಲಾಯಂ ಸಿಂಗ್ ಅವರ ಸೊಸೆ ಅಪರ್ಣಾ ಯಾದವ್ ಕೂಡ ಬಿಜೆಪಿಗೆ ನೂತನವಾಗಿ ಸೇರ್ಪಡೆಗೊಂಡಿದ್ದಾರೆ. ಸದ್ಯ ಬಿಜೆಪಿ ಸಾಕಷ್ಟು ಬಲಿಷ್ಟತೆಯಿಂದ ಕೂಡಿದ್ದು, ಬಿಜೆಪಿ ವಿರುದ್ಧ ಹೋರಾಡುವುದು ಕೊಂಚ ಕಷ್ಟಕರ ಎಂಬ ಗಾಳಿಸುದ್ದಿಗಳು ಉತ್ತರ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಕಳೆದ ಒಂದು ಎರಡು ವಾರಗಳಿಂದ ಅಖಿಲೇಶ್ ಯಾದವ್ ಹೆಸರು ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಲಿದ್ದಾರೆ ಎಂಬ ಶಂಕೆಗಳು ಇದ್ದವು. ಆದರೆ ಈಗ ಅದಕ್ಕೆಲ್ಲಾ ತೆರೆ ಎಳದಂತಾಗಿದೆ. ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಈ ಹಿಂದೆ ನವೆಂಬರ್ ತಿಂಗಳಲ್ಲಿ ನೀವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುತ್ತಿದ್ದೀರಾ ಎಂದು ಕೇಳಿದಾಗ, ಇಲ್ಲ ನಾನು ಖಂಡಿತವಾಗಿ ಸ್ಪರ್ಧಿಸುವುದಿಲ್ಲ ಎಂದು ಅಖಿಲೇಶ್ ಹೇಳಿದ್ದರು. ಆದರೆ ಈಗ ಆ ಹೇಳಿಕೆಗಳೆಲ್ಲಾ ತೆಲೆಕೆಳಗಾಗಿವೆ. ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿಗಳ ನಡುವೆ ಪೈಪೋಟಿ ನಡೆಯಲಿವೆ ಎನ್ನಬಹುದು.