ನವದೆಹಲಿ ಸೆ 30 : ಹಲವು ದಿನಗಳಿಂದ ಪಂಜಾಬ್ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 2 ದಿನಗಳ ಹಿಂದೆಯಷ್ಟೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇವರ ಭೇಟಿ ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸೆಪ್ಟೆಂಬರ್ 18 ರಂದು ಅಮರಿಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚರಣ್ ಜಿತ್ ಸಿಂಗ್ ಛನ್ನಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಸಚಿವ ಸಂಪುಟ ಸಹ ರಚನೆಯಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲೇ ಸಿಧು ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ನಿನ್ನೆಯೇ ಅಮರಿಂದರ್ ಸಿಂಗ್ ಅವರು ದೆಹಲಿಗೆ ಆಗಮಿಸಿದ್ದರು.
ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಕಾಂಗ್ರೆಸ್ ನ ತಳಮಳ ಮತ್ತಷ್ಟು ಹೆಚ್ಚಾಗಿದೆ. ಅಮರಿಂದರ್ ಸಿಂಗ್ ಅವರು ಒಂದು ವೇಳೆ ಬಿಜೆಪಿಗೆ ಸೇರ್ಪಡೆಯಾಗಿದ್ದೇ ಆದಲ್ಲಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿ ಕುರಿತು ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರು ಟ್ವೀಟ್ ಮಾಡಿ ‘ಅಮರಿಂದರ್ ಸಿಂಗ್ ಅವರು ವೈಯಕ್ತಿಕ ಕಾರಣಗಳಿಂದಾಗಿ ದೆಹಲಿಗೆ ಅಗಮಿಸಿದ್ದಾರೆ. ಈ ವೇಳೆ ಅವರು ಕೆಲವು ಮಿತ್ರರನ್ನು ಭೇಟಿ ಮಾಡಲಿದ್ದಾರೆ ಜೊತೆಗೆ ದೆಹಲಿಯಲ್ಲಿರುವ ಪಂಜಾಬ್ ಸಿಎಂ ನಿವಾಸವನ್ನು ಖಾಲಿ ಮಾಡಲಿದ್ದಾರೆ. ಈ ಭೇಟಿಯ ಕುರಿತು ಯಾವುದೇ ಊಹಾಪೋಹಗಳಿಗೆ ಅವಕಾಶವಿಲ್ಲ’ ಎಂದು ತಿಳಿಸಿದ್ದಾರೆ.