ನವನಟ ಮಧುಸೂದನ್ ಗೋವಿಂದ್ ನಾಯಕರಾಗಿ ನಟಿಸುತ್ತಿರುವ ‘ಮೇಡ್ ಇನ್ ಬೆಂಗಳೂರು’ ಚಿತ್ರದಲ್ಲಿ ಅನಂತ ನಾಗ್, ಸಾಯಿ ಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ನಟಿಸುತ್ತಿದ್ದಾರೆ. ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಈ ಹಿರಿಯನಟರು ಕೂಡ ಪಾಲ್ಗೊಂಡಿದ್ದರು.
ಪುನೀತ್ ಮಾಂಜ, ವಂಶಿಧರ್, ಹಿಮಾಂಶಿ ವರ್ಮ, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ, ಶಂಕರಮೂರ್ತಿ, ವಿನೀತ್, ರಮೇಶ್ ಭಟ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರದೀಪ್ ಶಾಸ್ತ್ರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.
ಅನಂತನಾಗ್ ಅವರು ಚಿತ್ರದ ಬಗ್ಗೆ ಮಾತನಾಡಿ, “ಕೆಲವು ತಿಂಗಳುಗಳ ಹಿಂದೆ ನಿರ್ಮಾಪಕ ಬಾಲಕೃಷ್ಣ ಮತ್ತು ನಿರ್ದೇಶಕ ಪ್ರದೀಪ್ ಶಾಸ್ತ್ರಿ ಈ ಚಿತ್ರದ ಸಂಬಂಧ ಮನೆಗೆ ಬಂದಿದ್ದರು. ಅವರು ರಾಘವೇಂದ್ರ ಸ್ವಾಮಿಗಳ ಪರಮಭಕ್ತರು. ನಾನು ಹುಟ್ಟಿದ್ದು ಕರಾವಳಿಯ ಭಾಗವಾದ್ದರಿಂದ ನನಗೆ ಮೊದಲು ಗುರು ರಾಘವೇಂದ್ರರ ಕುರಿತಾಗಿ ಗೊತ್ತಿರಲಿಲ್ಲ. ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿ ಮೊದಲ ಬಾರಿಗೆ ಗುರು ರಾಘವೇಂದ್ರ ಕುರಿತು ಹಾಡಿತ್ತು. ಆ ನಂತರ ಅವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಮನೆಯಲ್ಲಿ ಅವರ ಮೂರ್ತಿಯನ್ನಿಟ್ಟು ಪೂಜೆ ಸಹ ಪ್ರಾರಂಭವಾಯಿತು. ಅವರೇ ಈ ಪ್ರಾಜೆಕ್ಟ್ ಕೊಡಿಸಿದರೇನೋ ಎನಿಸುವಂತಿದೆ. ಪ್ರದೀಪ್ ಕೊಟ್ಟ ಸ್ಕ್ರಿಪ್ಟ್ ಓದಿದೆ. ಬಹಳ ಖುಷಿಯಾಯಿತು. ನನ್ನದು ಇದರಲ್ಲಿ ಹೀರಾ ನಂದಾನಿ ಎಂಬ ಸಿಂಧಿ ವ್ಯಾಪಾರಿಯ ಪಾತ್ರ ನನ್ನದು. ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ. ನನಗೆ ಒಬ್ಬ ಸಿಂಧಿ ವ್ಯಾಪಾರಿಯ ಪರಿಚಯವಿತ್ತು. ಅವರೇ ಖ್ಯಾತ ನಿರ್ಮಾಪಕ ಮತ್ತು ವಿತರಕ ಪಾಲ್ ಚಂದಾನಿ. ನನ್ನ ಅದೆಷ್ಟೋ ಚಿತ್ರಗಳ ವಿತರಣೆ ಮಾಡಿದ್ದಾರೆ ಅವರು. ಅವರನ್ನು ಹತ್ತಿರದಿಂದ ನೋಡಿದ್ದೆನಾದ್ದರಿಂದ ಅವರ ಮ್ಯಾನರಿಸಂ ಬಳಸಿಕೊಳ್ಳಬಹುದಾ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಒಪ್ಪಿದರು. ಅವರ ಮಾತಿನ ಧಾಟಿ ಮತ್ತು ಮ್ಯಾನರಿಸಂಗಳನ್ನು ಈ ಚಿತ್ರದಲ್ಲಿ ಸ್ವಲ್ಪ ಮಟ್ಟಿಗೆ ಬಳಸಿಕೊಂಡಿದ್ದೇನೆ” ಎಂದರು.
“ನಾನು ಅನಂತ್ ನಾಗ್ ಮತ್ತು ಪ್ರಕಾಶ್ ಬೆಳವಾಡಿ ಅವರ ದೊಡ್ಡ ಅಭಿಮಾನಿ” ಎಂದು ಮಾತು ಶುರು ಮಾಡಿದ ಸಾಯಿಕುಮಾರ್ ಅವರು ‘ಭಕ್ತ ಪ್ರಹ್ಲಾದ’ ಚಿತ್ರವು ತೆಲುಗಿಗೆ ಡಬ್ ಆದಾಗ ನಮ್ಮ ತಂದೆ, ಡಾ. ರಾಜ್ಕುಮಾರ್ ಅವರ ಪಾತ್ರಕ್ಕೆ ಡಬ್ ಮಾಡಿದರೆ, ನಾನು ಅನಂತ್ ನಾಗ್ ಅವರ ನಾರದನ ಪಾತ್ರಕ್ಕೆ ಡಬ್ ಮಾಡಿದ್ದೆ. ಈ ಚಿತ್ರವನ್ನು ನಾನು ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ ಅನಂತ್ ನಾಗ್ ಮತ್ತು ಪ್ರಕಾಶ್ ಬೆಳವಾಡಿ ಎಂದರೆ ತಪ್ಪಿಲ್ಲ. ಈ ಚಿತ್ರದಲ್ಲಿ ಅವರ ಜೊತೆಗೆ ನಟಿಸುವುದಕ್ಕೆ ಅವಕಾಶವಿಲ್ಲದಿದ್ದರೂ, ಅವರಿಬ್ಬರೂ ನಟಿಸಿರುವ ಚಿತ್ರದಲ್ಲಿ ನಾನೂ ಇದ್ದೇನೆ ಎನ್ನುವುದು ಖುಷಿ. ನಾನು ಡೈಲಾಗ್ಗಳಿಗೆ ಬಹಳ ಜನಪ್ರಿಯ. ಆದರೆ, ಇಲ್ಲಿ ನನಗೆ ಸಂಭಾಷಣೆ ಕಡಿಮೆ. ಎಕ್ಸ್ಪ್ರೆಶನ್ಗಳು ಜಾಸ್ತಿ. ಬರೀ ಭಾವನೆಗಳ ಮೂಲಕ ಅಭಿವ್ಯಕ್ತಿ ಮಾಡುವಂತಹ ಪಾತ್ರ ನನ್ನದು. ಇತ್ತೀಚಿನ ವರ್ಷಗಳಲ್ಲಿ ಯುವ ನಿರ್ದೇಶಕರ ಚಿತ್ರಗಳಲ್ಲಿ ಹೆಚ್ಚುಹೆಚ್ಚು ಕೆಲಸ ಮಾಡುವುದಕ್ಕೆ ಅವಕಾಶ ಸಿಗುತ್ತಿವೆ” ಎಂದರು.
ಪ್ರಕಾಶ್ ಬೆಳವಾಡಿ ತಮ್ಮ ಪಾತ್ರದ ಪರಿಚಯ ಮಾಡಿಕೊಳುತ್ತಾ, ಈ ಕಥೆ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗಳ ನಿರ್ಮಾಣ ಜಾಸ್ತಿಯಾದರೆ ಕನ್ನಡ ಚಿತ್ರರಂಗದ ಹಿಂದಿನ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ ಎಂದರು.
“ಕಥೆ ಕೇಳಿದ ನಾನು, ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡುವ ಸಲುವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ” ಎನ್ನುವುದು ನಿರ್ಮಾಪಕ ಬಾಲಕೃಷ್ಣ ಅವರ ಮಾತು. ಪತ್ರಕರ್ತ, ಜನಪ್ರಿಯ ಬರಹಗಾರ ಜೋಗಿ ಅವರು ಸಹ ಈ ಸಮಾರಂಭಕ್ಕೆ ಆಗಮಿಸಿ ಬೆಂಗಳೂರು ಹಾಗೂ ತಮ್ಮ ನಡುವಿನ ಬಾಂಧವ್ಯ ವಿವರಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ಅಶ್ವಿನ್ ಪಿ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಭಜರಂಗ್ ಛಾಯಾಗ್ರಹಣ ಹಾಗೂ ಶಾಂತಕುಮಾರ್ ಅವರ ಸಂಕಲನ “ಮೇಡ್ ಇನ್ ಬೆಂಗಳೂರು” ಚಿತ್ರಕ್ಕಿದೆ. ಚಿತ್ರ ರಜನಿ ಥರ್ಸ್ಡೇ ಸ್ಟೋರೀಸ್ ಸಂಸ್ಥೆಯಡಿ ನಿರ್ಮಾಣವಾಗಿದೆ.