ಹೊಸದಿಲ್ಲಿ,ಜೂ.24: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎದುರಾದ ಸೋಲು ಐಸಿಸಿ ಪ್ರಶಸ್ತಿ ಗೆಲ್ಲುವ ಭಾರತದ ಕನಸನ್ನು ಭಗ್ನಗೊಳಿಸಿದೆ.
ಕಳೆದ ಎಂಟು ವರ್ಷಗಳಿಂದ ಐಸಿಸಿ ಟ್ರೋಫಿ ಗೆಲುವಿಗಾಗಿ ಹಾತೊರೆಯುತ್ತಿರುವ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗೆದ್ದು, ಕನಸು ನನಸಾಗಿಸುವ ನಿರೀಕ್ಷೆ ಹೊಂದಿತ್ತು. ಆದರೆ ಕಿವೀಸ್ ವಿರುದ್ಧ ಅನುಭವಿಸಿದ 8 ವಿಕೆಟ್ ಗಳ ಸೋಲು ಟೀಂ ಇಂಡಿಯಾ ನಿರೀಕ್ಷೆಯನ್ನೆಲ್ಲಾ ಹುಸಿಯಾಗಿಸಿತು. ಇದರಿಂದಾಗಿ ಐಸಿಸಿ ಟ್ರೋಫಿಗಾಗಿ ಭಾರತದ 8 ವರ್ಷಗಳ ಕಾಯುವಿಕೆ ಮತ್ತಷ್ಟು ವಿಸ್ತರಿಸಿದ್ದು, ಈ ಬರ ನೀಗಿಸಿಕೊಳ್ಳಲು ಮುಂಬರುವ ಟಿ20 ವಿಶ್ವಕಪ್ವರೆಗೂ ಕಾಯಬೇಕಾಗಿದೆ.
ಈ ಹಿಂದ 2013ರಲ್ಲಿ ಇಂಗ್ಲೆಂಡ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು. ಆ ಬಳಿಕ 2014ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ದ ಸೋತು ನಿರಾಸೆ ಅನುಭವಿಸಿತ್ತು. ನಂತರ 2015ರ ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಎದುರಾದ ಸೋಲು ಭಾರತದ ಪ್ರಶಸ್ತಿ ಗೆಲುವಿನ ಆಸೆಗೆ ತಣ್ಣೀರೆರಚಿತು.
ಬಳಿಕ 2016ರಲ್ಲಿ ತವರಿನಲ್ಲಿ ನಡೆದ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಭಾರತದ ನಿರೀಕ್ಷೆಯನ್ನು ವೆಸ್ಟ್ ಇಂಡೀಸ್ ಆಟಗಾರರು ಹುಸಿಯಾಗಿಸಿದರು. ಬಳಿಕ 2017ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲಿನ ಆಘಾತ ನೀಡಿತು. ಇನ್ನು 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲು ಐಸಿಸಿ ಟ್ರೋಫಿ ಗೆಲ್ಲುವ ಭಾರತದ ಕನಸವನ್ನು ಭಗ್ನಗೊಳಿಸಿತು.
ಕೊಹ್ಲಿ ಕನಸು ನುಚ್ಚುನೂರು
ಟೀಂ ಇಂಡಿಯಾದ ಯಶಸ್ವಿ ನಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ಬಳಿಕ ವಿರಾಟ್ ಕೊಹ್ಲಿ, ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಭಾರತ ವಿಶ್ವ ಕ್ರಿಕೆಟ್ ನಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಆದರೆ ಟೆಸ್ಟ್, ಏಕದಿನ ಹಾಗೂ ಟಿ೨೦ ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಭಾರತಕ್ಕೆ ಕೊಹ್ಲಿ ಸಾರಥ್ಯದಲ್ಲಿ ಐಸಿಸಿ ಪ್ರಶಸ್ತಿ ಗೆಲ್ಲುವ ಅದೃಷ್ಟ ಮಾತ್ರ ಒಲಿದು ಬಂದಿಲ್ಲ.
ಧೋನಿ ಬಳಿಕ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ, 2 ಬಾರಿ ಏಕದಿನ ವಿಶ್ವಕಪ್, 2 ಬಾರಿ ಟಿ೨೦ ವಿಶ್ವಕಪ್ ಹಾಗೂ ಒಂದು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು, ಪ್ರಶಸ್ತಿ ಗೆಲುವಿನ ಆಸೆ ಮಾತ್ರ ಈಡೇರಿರಲಿಲ್ಲ. ಇದೀಗ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಗೆದ್ದು ಪ್ರಶಸ್ತಿ ದಾಹ ನೀಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ವಿರಾಟ್ ಕೊಹ್ಲಿಗೆ ನ್ಯೂಜಿಲೆಂಡ್ ವಿರುದ್ಧ ಎದುರಾದ ಸೋಲಿನಿಂದಾಗಿ ಕೊಹ್ಲಿ ಕನಸು ಭಗ್ನಗೊಂಡಿದೆ.