ಕೊಡಗು, ಮಾ. 09: ಕೊಡಗಿನಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರನೇ ಜೀವ ಬಲಿಯಾಗಿದ್ದು, ಹುಲಿ ಅಟ್ಟಹಾಸದಿಂದ ಕಂಗಾಲಾಗಿರುವ ಸ್ಥಳೀಯ ನಿವಾಸಿಗಳು ಘಟನೆಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಅಸಡ್ಡೆಯೇ ಕಾರಣವೆಂದು ಆರೋಪಿಸಿದ್ದಾರೆ. ಅಲ್ಲದೇ ಘಟನೆಗೆ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವರು ಹಾಗೂ ಜಿಲ್ಲೆಯ ಶಾಸಕರುಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ತೋಟದ ಕೆಲಸ ಮಾಡುತಿದ್ದ ಕೆಂಚ (52) ಹಾಗೂ ಅವರ ಮಗ ರಂಗಸ್ವಾಮಿ(8) ಮೇಲೆ ಹುಲಿ ದಾಳಿ ಮಾಡಿದೆ. ದಾಳಿಯ ಭೀಕರತೆಗೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕೆಂಚರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಿಯ ಆರ್ಭಟಕ್ಕೆ ಕಳೆದ ದಿನಗಳಲ್ಲಿ ಮೂರು ವ್ಯಕ್ತಿಗಳು ಸೇರಿದಂತೆ 12 ಹಸುಗಳು ಬಲಿಯಾಗಿವೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗಾಗಿ ಹರಸಾಹ ಪಡುತ್ತಿದ್ದಾರೆ. ಇಂದು ಬೆಳಿಗ್ಗೆ ತೋಟದಲ್ಲಿ ಕೆಲಸ ಮಾಡುತಿದ್ದ ಸಂದರ್ಭ ಕೆಂಚನನ್ನು ಗಂಭಿರ ಗಾಯಗೊಳಿಸಿದ ಹುಲಿ ಜತೆಯಲ್ಲೇ ಇದ್ದ ಮಗನನ್ನು ಬಲಿ ಪಡೆದಿದೆ.
ಈ ನಡುವೆ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಫೆಬ್ರವರಿ ತಿಂಗಳಿನಲ್ಲಿ ಮೊದಲ ಜೀವ ಬಲಿಯಾದಾಗಲೇ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹುಲಿಯನ್ನು ಸೆರೆ ಹಿಡಿದಿದ್ದರೆ ಅಥವಾ ಕೊಂದು ಹಾಕಿದ್ದರೆ ಪರಿಸ್ಥಿತಿ ಕೈಮೀರುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳದ ಅರಣ್ಯ ಸಚಿವರು ಹಾಗೂ ಜಿಲ್ಲೆಯ ಶಾಸಕರು ಅಸಮರ್ಥರು ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಆರೋಪಿಸಿರುವ ಪವನ್ ಪೆಮ್ಮಯ್ಯ, ಜನರ ವಿಶ್ವಾಸ ಕಳೆದುಕೊಂಡಿರುವ ಇವರುಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕೇವಲ ಮೂರು ವಾರಗಳಲ್ಲಿ ಮೂವರು ಅಮಾಯಕರು ಹಾಗೂ ಹತ್ತಾರು ಹಸುಗಳು ಹುಲಿ ದಾಳಿಯಿಂದ ಮೃತಪಟ್ಟಿದ್ದರೂ ಈ ಘಟನೆಯನ್ನು ರಾಜ್ಯ ಅರಣ್ಯ ಸಚಿವರು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲೆಗೆ ಆಗಮಿಸಿ ವಿಶೇಷ ಸಭೆ ನಡೆಸುವ ಆಸಕ್ತಿಯನ್ನೇ ತೋರದ ಅವರು, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಲ್ಲಿಯೂ ವಿಫಲರಾಗಿದ್ದಾರೆ. ಶಾಸಕರುಗಳು ತಮ್ಮದೇ ಸರ್ಕಾರವಿದ್ದರೂ ಹುಲಿ ದಾಳಿ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಕೇವಲ ಸ್ವಜನ ಪಕ್ಷಪಾತ ಮತ್ತು ಗುತ್ತಿಗೆ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿದ್ದು, ಜಿಲ್ಲೆಯ ಜನರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಡುವೆ ದಕ್ಷಿಣ ಕೊಡಗಿನಲ್ಲಿ ನಡೆಯುತ್ತಿರುವ ಗ್ರಾಮಸ್ಥರ ಪ್ರತಿಭಟನೆಗೆ ಕೊಡಗು ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದು ತಿಳಿಸಿರುವ ಅವರು, ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸದಿದ್ದಲ್ಲಿ ವೇದಿಕೆ ವತಿಯಿಂದ ಮಡಿಕೇರಿ ಅರಣ್ಯ ಭವನದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.