ಲಕ್ನೋ ಜ 19 : ದೇಶದ ರಾಜಕಾರಣ ಅಖಾಡಕ್ಕೆ ಹೆಜ್ಜೆಯಿಡಬೇಕು, ರಾಜಾಕೀಯಕ್ಕೆ ಧುಮುಕಬೇಕು, ರಾಜಕೀಯ ತಂತ್ರಗಳನ್ನು ಭೇದಿಸಿ ತನ್ನದೇ ಛಾಪನ್ನು ಹೊಸೆಯಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸುತ್ತಿದ್ದ ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತೆಯಾದ ಅಪರ್ಣಾ ಯಾದವ್ ಅವರು ನವದೆಹಲಿಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಸ್ವತಂತ್ರ ದೇವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಸೇರಿದ ಬಳಿಕ ಪ್ರತಿಕ್ರಿಯಿಸಿದ ಅವರು , ನಾನು ಪ್ರಧಾನಿ ಮೋದಿಯವರ ಆಲೋಚನೆಗಳಿಂದ ಪ್ರಭಾವಿತಳಾಗಿದ್ದೇನೆ ಎಂದು ಹೇಳಿದರು. ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತವನ್ನು ನೀಡಿದ್ದಾರೆ. ಬಿಜೆಪಿ-ಎಸ್ಪಿ ಪೈಪೋಟಿಯುಲ್ಲಿ ಬಿಜೆಪಿ ಈಗ ಒಬ್ಬ ದೊಡ್ಡ ನಾಯಕಿಯನ್ನು ಬೇಟೆಯಾಡುವುದರೊಂದಿಗೆ ಒಂದು ಹಂತವನ್ನು ಮೇಲೆ ತಲುಪಿದೆ.
ಅಪರ್ಣಾ ಯಾದವ್ ಕಾಲಕಾಲಕ್ಕೆ ಹಲವಾರು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಲಾಜಿಲ್ಲದೆ ವ್ಯಕ್ತಪಡಿಸುತ್ತಿದ್ದರು. ಬಿಜೆಪಿ ಅಪರ್ಣಾ ಅವರನ್ನು ನಮ್ಮ ಕುಟುಂಬದ ಭಾಗವೆಂದು ನಾವು ಭಾವಿಸಿದ್ದೇವೆ ಎಂದು ಕೇಶವ್ ಮೌರ್ಯ ಹೇಳಿದರು. ಅಖಿಲೇಶ್ ಅವರು ರಾಜ್ಯವನ್ನು ಮುನ್ನೆಡಸಲು ಯಶಸ್ವಿಯಾಗಿಲ್ಲ, ಮುಖ್ಯಮಂತ್ರಿಯಾಗಿಯೂ ಅವರು ವಿಫಲಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಆಳ್ವಿಕೆಯಲ್ಲಿ, ಪಶ್ಚಿಮ ಯು.ಪಿ ಅಜಂ ಖಾನ್ ಅಡಿಯಲ್ಲಿತ್ತು. ಯಾವುದೇ ಸುರಕ್ಷತೆ ಇರಲಿಲ್ಲ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯು.ಪಿ ಬಿಜೆಪಿ ಮುಖ್ಯಸ್ಥರಾದ ಸ್ವತಂತ್ರ ದೇವ್ ಹೇಳಿದರು. ಅಪರ್ಣಾ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಪ್ರಧಾನಿ ಮೋದಿಯವರ ಸಿದ್ಧಾಂತಗಳು ಯಾವಾಗಲೂ ನನಗೆ ಸ್ಫೂರ್ತಿ ನೀಡುತ್ತವೆ, ನೀಡಿವೆ ಮತ್ತು ಅವರು ಮೊದಲು ರಾಷ್ಟದ ಹಿತದೃಷ್ಟಿಗೆ ಒತ್ತು ನೀಡುತ್ತಾರೆ. ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಳೆದ ಕೆಲವು ದಿನಗಳಿಂದ ಅಪರ್ಣಾ ಯಾದವ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆಗಳಲ್ಲಿ ಹರಿದಾಡುತ್ತಿದ್ದವು. ಮಂಗಳವಾರ, ಅಪರ್ಣಾ ದೆಹಲಿಗೆ ಹಾರಿ, ಅಧಿಕೃತವಾಗಿ ಬಿಜೆಪಿಗೆ ಸೇರುವ ಮೊದಲು ಬುಧವಾರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಆದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಪರ್ಣಾ ರೀಟಾ ಬಹುಗುಣ ಅವರ ವಿರುದ್ದ ಸೋಲನುಭವಿಸಿದ್ದರು. ಹೀಗಾಗಿ ಅಪರ್ಣಾ ರಾಜಕೀಯಕ್ಕೆ ಹೊಸಬರೇನಲ್ಲ. ಈ ಬಾರಿಯೂ ಕೂಡ ಅಪರ್ಣಾ ಅವರು ಲಕ್ನೋ ಕ್ಯಾಂಟ್ನಿಂದ ಸ್ಪರ್ಧಿಸಲು ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.