Bosaraju may have been Trained by Siddaramaiah to commit illegal Acts in the name of his wife – Aravinda Bellada
Bengaluru: ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre), ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ನಂತರ ಈಗ ಮೂಡಾಮಂತ್ರಿಯ ಸಂಪುಟದ ಮತ್ತೋರ್ವ ಸಚಿವ ಬೋಸರಾಜು ಅವರು ಅರಣ್ಯ ಭೂಮಿ ಕಬಳಿಕೆಯ ರೇಸ್ನಲ್ಲಿ ಮುಂದಿದ್ದಾರೆ. ಬೋಸರಾಜು ಅವರಿಗೆ, ಪತ್ನಿಯ ಹೆಸರಿನಲ್ಲಿ ಅಕ್ರಮ ಎಸಗುವ ಕಲೆ ಬಹುಶಃ ಸಿದ್ದರಾಮಯ್ಯನವರಿಂದ ಸಿದ್ಧಿಸಿರಬಹುದು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ (Aravinda Bellada) ಟೀಕಿಸಿದ್ದಾರೆ.

ರಾಯಚೂರು ಜಿಲ್ಲೆಯ ವ್ಯಾಪ್ತಿಯ ರಕ್ಷಿತ ಅರಣ್ಯ ವಲಯದ 16.21 ಎಕರೆ ಭೂಮಿಯನ್ನು ಸಚಿವ ಬೋಸರಾಜು (Bosaraju) ಅವರ ಪತ್ನಿ ಹಾಗೂ ಇತರೆ ನಾಲ್ವರು ಸೇರಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಈ ಕುರಿತು ಸಚಿವ ಬೋಸರಾಜು ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಶಾಸಕ ಅರವಿಂದ ಬೆಲ್ಲದ ಅವರು, ಕಾಡಂಚಿನ ರೈತರು ತಮ್ಮ ಜೀವನೋಪಾಯಕ್ಕಾಗಿ ತುಂಡು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡರೂ, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬಂತೆ ಬಡಪಾಯಿ ರೈತರ ಮೇಲೆ ದಬ್ಬಾಳಿಕೆ ನಡೆಸಿ, ಅನ್ನದಾತರ ಆತ್ಮಹತ್ಯೆಗೆ ಕಾರಣೀಭೂತವಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಈ ಭೂಗಳ್ಳ ಸಚಿವರ ರಾಜೀನಾಮೆ ಪಡೆಯುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ಕನ್ನಡನಾಡಿನ ನೆಲ-ಜಲವನ್ನು ರಕ್ಷಿಸಬೇಕಾದ ಸರ್ಕಾರವೇ ಮುಂದೆ ನಿಂತು ನಾಡಿನ ಅರಣ್ಯ ಸಂಪತ್ತನ್ನು ಕಬಳಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ? IPC 420 A1 ಭ್ರಷ್ಟ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮುಡಾ ಸೈಟು ಲೂಟಿ ಹೊಡೆದು ಭಂಡತನ ತೋರುವಂತೆ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸದಸ್ಯರು ಕೂಡ ಸರ್ಕಾರಿ ಭೂಮಿಯನ್ನು ಗುಳುಂ ಮಾಡುತ್ತಿದ್ದಾರೆ. ಸಚಿವ ಬೋಸರಾಜು ಅವರು ತಮ್ಮ ಪತ್ನಿ ಹೆಸರಿಗೆ 5 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಬಳಿಸಿದ್ದಾರೆ. ಬೋಸರಾಜು ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೂ ರಾಜ್ಯದಲ್ಲಿ ಸರ್ಕಾರಿ ಆಸ್ತಿ, ಅರಣ್ಯ ಭೂಮಿ, ದಲಿತರ ಜಮೀನಿಗೆ ರಕ್ಷಣೆಯೇ ಇರುವುದಿಲ್ಲ ಎಂದು ಟೀಕಿಸಿದ್ದಾರೆ.