ದಾಸಶ್ರೇಷ್ಠರಲ್ಲೊಬ್ಬರಾದ, ಹರಿಕಥಾಮೃತಸಾರವೆಂಬ ಮೇರು ಕೃತಿಯನ್ನು ಜಗತ್ತಿಗೆ ನೀಡಿದ, ಶ್ರೀ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನಾಧರಿಸಿದ ‘ಶ್ರೀ ಜಗನ್ನಾಥ ದಾಸರು’ ಎಂಬ ಚಿತ್ರ ತೆರೆಗೆ ಬರುತ್ತಿದೆ.
ಈ ಭಕ್ತಿಪ್ರಧಾನ ಚಿತ್ರದ ಹಾಡುಗಳ ಧ್ವನಿ ಸಾಂದ್ರಿಕೆ ಬಿಡುಗಡೆ ಸಾಮಾರಂಭ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು.
ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಈ ಚಿತ್ರದ ಧ್ವನಿ ಸಾಂದ್ರಿಕೆ ಬಿಡುಗಡೆಮಾಡಿದರು. “ಮನುಷ್ಯ ಹಾಗೂ ದೇವರ ನಡುವಿನ ಕೊಂಡಿ ಅಂದರೆ ಅದು ಭಕ್ತಿ. ಅಂತಹ ಪರಿಶುದ್ಧ ಭಕ್ತಿಯಿದ್ದರೆ ಮಾತ್ರ ದೇವರು ಒಲಿಯುತ್ತಾನೆ. ನಮಗೆ ಅಂತಹ ಪರಿಶುದ್ಧ ಭಕ್ತಿಯನ್ನು ದೇವರ ಬಳಿ ನಿವೇದಿಸುವುದು ಹೇಗೆ ಎಂಬುದನ್ನು ತಮ್ಮ ಕೃತಿಗಳ ಮೂಲಕ ಜಗನ್ನಾಥದಾಸರು ತೋರಿಸಿಕೊಟ್ಟಿದ್ದಾರೆ.
ಅಂತಹ ದಾಸಶ್ರೇಷ್ಠರ ಜೀವನ ಚರಿತ್ರೆ ಚಲನಚಿತ್ರ ರೂಪದಲ್ಲಿ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕೆ ಶ್ರಮಪಟ್ಟಿರುವ ಚಿತ್ರತಂಡದ ಎಲ್ಲಾ ಸದಸ್ಯರಿಗೂ ದಾಸರ ಮೂಲಕ ಭಗವಂತನ ಅನುಗ್ರಹವಾಗಲಿ” ಎಂದು ಶ್ರೀಗಳು ನುಡಿದರು.
ಚಿತ್ರದ ನಿರ್ದೇಶಕ, ನಿರ್ಮಾಪಕ ಮಧುಸೂದನ್ ಹವಾಲ್ದಾರ್ ಸಹ ಈ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸೆಪ್ಟಂಬರ್ ನಲ್ಲಿ ಬರುವ ಜಗನ್ನಾಥದಾಸರ ಆರಾಧನೆ ವೇಳೆಗೆ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.
ಚಿತ್ರಕ್ಕೆ ಸಹಕಾರ ನೀಡಿರುವ ಹಾಗೂ ವಿಜಯದಾಸರ ಪಾತ್ರದಲ್ಲಿ ಕಾಣಿಸಿಕೊಂಡಿರುವ ತ್ರಿವಿಕ್ರಮ ಜೋಷಿ ಅವರು ಚಿತ್ರ ಸಾಗಿ ಬಂದ ಹಾದಿಯ ಬಗ್ಗೆ ವಿವರಣೆ ನೀಡಿದರು. ಹಾಡುಗಳ ಹಾಗೂ ಗಾಯಕರ ಬಗ್ಗೆ ಸಂಗೀತ ನಿರ್ದೇಶಕ ವಿಜಯ್ ಕೃಷ್ಣ ತಿಳಿಸಿದರು. ಮೂರು ಹಾಡುಗಳ ಪ್ರದರ್ಶನ ಕೂಡ ಮಾಡಲಾಯಿತು.
ಹೈದರಾಬಾದ್ ಮೂಲದ ಶರತ್ ಜೋಷಿ ಜಗನ್ನಾಥದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವಿಕ್ರಮ ಜೋಷಿ, ಪ್ರಭಂಜನ ದೇಶಪಾಂಡೆ, ಸುರೇಶ್ ಕಾಣೇಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಹಿರಿಯ ನಿರ್ದೇಶಕ ಭಗವಾನ್, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ಉಮೇಶ್ ಬಣಕಾರ್, ಭಾ.ಮ.ಹರೀಶ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.