ಹಿರಿಯೂರು ಸೆ 24 : ವಿಧಾನಸಭಾ ಚುನಾವಣೆಗೆ ಕೇವಲ ಒಂದುವರೆ ವರ್ಷ ಇರುವ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳು ಹಲವು ಶಾಸಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದು, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೂ ಕೂಡ ಕಾಂಗ್ರೆಸ್ ಗಾಳ ಹಾಕಿದ್ದು, ಶೀಘ್ರದಲ್ಲೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಇದೀಗ ಮುಂಬರುವಂತ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಸೇರಿದಂತೆ, ಸೂಕ್ತ ಅಭ್ಯರ್ಥಿಗಳ ಹುಟುಕಾಟದಲ್ಲಿ ತೊಡಗಿದೆ. ಕೋಟೆ ನಾಡಿನಲ್ಲಿ ತಮ್ಮ ಪಕ್ಷದ ಪ್ರಭಲ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿರುವಂತ ಕಾಂಗ್ರೆಸ್ ನಾಯಕರು, ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡು ತೆರೆ ಮರೆಯಲ್ಲಿ ಮುನಿಸು ತೋರುತ್ತಿರುವಂತ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದು, ಗೊಲ್ಲ ಸಮುದಾಯದ ಮುಖಂಡರ ವೋಟೋ ಬ್ಯಾಂಕ್ ರಾಜಕಾರಣಕ್ಕೆ ಗಾಳವಾಗಿ ಮಾಡಿಕೊಳ್ಳೋದಕ್ಕೆ ಈ ಕಸರತ್ತನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷ ಸೇರುವ ಒಲವು ತೋರಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಆಡಳಿತಾರೂಢ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕಮಲ ತೊರೆಯದೇ ಇದ್ದರೂ, 2023ರ ವಿಧಾನಸಭಾ ಚುನಾವಣೆ ವೇಳೆಗೆ ಕಮಲ ಪಕ್ಷಕ್ಕೆ ಗುಡ್ ಬೈ ಹೇಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಈ ಬಾರಿ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ನನಗೆ ಅಲ್ಲದಿದ್ದರೂ ಪಕ್ಷದ ಬೇರೆ ಮಹಿಳೆಯರಿಗೆ ಅವಕಾಶ ನೀಡಬೇಕಿತ್ತು. ಮಹಿಳಾ ಶಾಸಕಿಯಾದ ನನಗೂ ಸಚಿವ ಸ್ಥಾನ ಕೊಟ್ಟಿಲ್ಲ. ನಮ್ಮ ಜಿಲ್ಲೆಗೂ ಸಚಿವ ಸ್ಥಾನವನ್ನು ಕೊಟ್ಟಿಲ್ಲ. ನನ್ನ ಅಭಿಪ್ರಾಯ ಪಕ್ಷವಿರೋಧಿ ಎಂದು ಹೇಳಬೇಡಿ. ನನ್ನ ಅಭಿಪ್ರಾಯದ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಗೊಲ್ಲ ಸಮುದಾಯದ ನಾನೊಬ್ಬಳೇ ಶಾಸಕಿಯಾಗಿದ್ದೇನೆ. ಈ ಬಾರಿ ನಮ್ಮ ಜನಾಂಗದ ಬಗ್ಗೆ ಪಕ್ಷ ನಿರ್ಲಕ್ಷ್ಯ ಮಾಡಿದೆ? ಹೀಗಾಗಿ ಮನಸ್ಸಿನಲ್ಲಿ ಇರುವ ಬೇಸರವನ್ನ ವ್ಯಕ್ತಪಡಿಸಿದ್ದೇನೆ. ಈ ಹಿಂದೆ ಕಾಂಗ್ರೆಸ್, ಜನತಾದಳ ಸರ್ಕಾರ ನಮ್ಮ ಸಮುದಾಯಕ್ಕೆ ಅವಕಾಶ ನೀಡಿತ್ತು. ಇದನ್ನು ಪಕ್ಷ, ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಶಾಸಕಿ ಪೂರ್ಣಿಮಾ ಬೇಸರ ವ್ಯಕ್ತಪಡಿಸಿದ್ದರು