ನವದೆಹಲಿ, ಮಾ. 08: 2008ರ ಬಾಟ್ಲಾ ಹೌಸ್ ಎನ್ಕೌಂಟರ್ʼಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ತನ್ನ ತೀರ್ಪು ಪ್ರಕಟಿಸಿದ್ದು, ಆರೋಪಿ ಆರಿಜ್ ಖಾನ್ ದೋಷಿ ಎಂದು ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಿಜ್ ಖಾನ್ನನ್ನು 2018ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ದಶಕದ ನಂತರ ದೆಹಲಿ ಪೊಲೀಸರ ವಿಶೇಷ ಘಟಕ ಖಾನ್ನನ್ನು ಬಂಧಿಸಿತ್ತು. ಸದ್ಯ ಈ ನ್ಯಾಯಾಲಯದಿಂದ ತೀರ್ಪು ಹೊರ ಬಿದ್ದಿದ್ದು, ಆರಿಜ್ ಖಾನ್ ದೋಷಿ ಎಂದಿದೆ. ಇನ್ನು ಶಿಕ್ಷೆಯ ಪ್ರಮಾಣವನ್ನ ಮಾರ್ಚ್ 10ರಂದು ನ್ಯಾಯಾಲಯ ಪ್ರಕಟಿಸಲಿದೆ.
ಸಾಕೇತ್ ಕೋರ್ಟ್ನ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸಂದೀಪ್ ಯಾದವ್ ಅವರು ಈ ತೀರ್ಪು ನೀಡಿದ್ದಾರೆ. ತೀರ್ಪಿನ ವೇಳೆ ತನ್ನ ಹಾಜರಿಯನ್ನು ಕೋರಿದ್ದ ಜುನೈದ್ ಅಲಿಯಾಸ್ ಅರಿಜ್ ಖಾನ್ ವಿರುದ್ಧ ಭಾನುವಾರ ಪ್ರೊಡಕ್ಷನ್ ವಾರಂಟ್ ಜಾರಿಮಾಡಲಾಗಿತ್ತು.
2018ರ ಫೆಬ್ರವರಿಯಲ್ಲಿ ಬಂಧನಕ್ಕೊಳಗಾಗಿದ್ದ ಅಜೀಜ್ ಖಾನ್, ಬಾಟ್ಲಾ ಹೌಸ್ ಎನ್ ಕೌಂಟರ್ ವೇಳೆ ಸ್ಥಳದಲ್ಲಿ ಹಾಜರಿದ್ದು, ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಖಾನ್ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಜತೆ ನಂಟು ಹೊಂದಿದ್ದ ಎನ್ನಲಾಗಿದೆ.
ಎನ್ ಕೌಂಟರ್ ನಡೆದ ಸಂದರ್ಭದಲ್ಲಿ ಆತ ಇತರ ನಾಲ್ವರು ಭಯೋತ್ಪಾದಕರೊಂದಿಗೆ ಬಟ್ಲಾ ಹೌಸ್ ನಲ್ಲಿ ಇದ್ದಎಂದು ಪೊಲೀಸರು ಹೇಳಿದ್ದಾರೆ. ಎನ್ ಕೌಂಟರ್ ನಲ್ಲಿ ಇಬ್ಬರು ಇಂಡಿಯನ್ ಮುಜಾಹಿದೀನ್ ಉಗ್ರರು – ಆತಿಫ್ ಅಮೀನ್ ಮತ್ತು ಮೊಹಮ್ಮದ್ ಸಾಜಿದ್ ಹತರಾಗಿದ್ದರು ಮತ್ತು ಇನ್ನಿಬ್ಬರು ತಪ್ಪಿಸಿಕೊಂಡರು. ಮೊಹಮ್ಮದ್ ಸೈಫ್ ಮತ್ತು ಜೀಶಾನ್ ನನ್ನು ಈಗಾಗಲೇ ಬಂಧಿಸಲಾಗಿದೆ.
2008ರ ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಒಂದು ವಾರದ ಬಳಿಕ ಈ ಕಾರ್ಯಾಚರಣೆ ನಡೆದಿತ್ತು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಐಎಂ ಭಯೋತ್ಪಾದಕ ಶಹಜಾದ್ ಅಹ್ಮದ್ ಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪಿನ ವಿರುದ್ಧ ಅವರು ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟ್ ನಲ್ಲಿ ಬಾಕಿ ಇದೆ.