ಬೆಂಗಳೂರು ಅ 23 : ಭಾರತವು 100 ಕೋಟಿ ಲಸಿಕೆ ಹಾಕಿಸಿದ ಸಂಭ್ರಮ ಆಚರಣೆಯಲ್ಲಿರುವ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಲಸಿಕೆ ಪಡೆದ ಮಹಿಳೆಯೊಬ್ಬರು ಕೆಲವೇ ಕ್ಷಣಗಳಲ್ಲಿ ಅಸುನೀಗಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಮಂಗಳಾ (36) ಎಂಬ ಮಹಿಳ ಬೆಳಗ್ಗೆ ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದು ಬರುತ್ತಿದ್ದ ವೇಳೆ ಮಾರುಕಟ್ಟೆ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮಹಿಳೆ ಕಾಮಾಕ್ಷಿಪಾಳ್ಯದಲ್ಲಿ ಪತ್ನಿ ದಿನೇಶ್ ಅವರೊಂದಿಗೆ ವಾಸವಾಗಿದ್ದರು. ಕೊರೊನಾ ಸೋಂಕಿಗೆ ಲಸಿಕೆ ಹಾಕಿಸಿಕೊಳ್ಳಲೆಂದು ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಳು. ಸುಮಾರು 11.20 ರ ಸುಮಾರಿಗೆ ಲಸಿಕೆ ಪಡೆದು ಮನೆಗೆ ವಾಪಸ್ ಆಗಮಿಸುತ್ತಿದ್ದರು. ಮನೆ ಸಮೀಪದ ಮಾರ್ಕೆಟ್ ಬಳಿ ಬರುವಾಗ ಕೆಳಗೆ ಕುಸಿದು ಬಿದ್ದಿದ್ದಾರೆ. ಮಂಗಳಾ ಅವರು ಕುಸಿದು ಬಿದ್ದಿದ್ದನ್ನು ನೋಡಿದ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಮಂಗಳಾ ಸಾವನ್ನಪ್ಪಿರುವುದನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಲಸಿಕೆ ಹಾಕಿಸಿಕೊಂಡ ಕಾರಣದಿಂದ ಮಂಗಳಾ ಸಾವನ್ನಪ್ಪಿದ್ದಾರೆಯೇ? ಅಥವಾ ಅನ್ಯ ಕಾರಣದಿಂದ ಮೃತಪಟ್ಟರೇ ಎಂಬುದು ವೈದ್ಯಕೀಯ ಪರೀಕ್ಷೆಯ ಬಳಿಕ ನಿಖರ ಕಾರಣ ಗೊತ್ತಾಗಲಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಮೃತರ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.