ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಲೋಕಸಭಾ ಚುನಾವಣೆ (Loksabha Election) ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಚುನಾವಣೆ, ನಾಗರೀಕ ಸಮಾಜಕ್ಕೆ ಪ್ರತಿನಿಧಿಗಳ ಆಯ್ಕೆ ಮಾಡಿಕೊಳ್ಳುವ ಅಮೂಲ್ಯ ಅವಕಾಶ. so called ಜನಸೇವಕರು ಅನ್ನಿಸಿಕೊಳ್ಳುವ ರಾಜಕಾರಣಿಗಳು ಮತದಾರರ ಮುಂದೆ ಮತ ಭಿಕ್ಷೆ ಕೇಳುವ ಸಮಯದಲ್ಲಿ ವಿರೋಧಿಗಳ ಮೇಲಿನ ಕೆಸರೆರಚಾಟಗಳ ಜೊತೆಗೆ ಭರವಸೆಗಳ ಮಹಾಪೂರಗಳನ್ನು ಗುಡಿಗಿಸುವುದು ಹೊಸತೇನಲ್ಲ.

ಪ್ರಜಾಪ್ರಭುಗಳೇ ಮತಕ್ಕಾಗಿ ಅಂಗಲಾಚುವ ಪ್ರಹಸನ ನಡೆಯುವುದು ಅಪರೂಪದ ವಿಷಯ. ಇದೆಲ್ಲದರ ಜೊತೆಗೆ ಚುನಾವಣೆ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ನೋಡಬಯಸುವವರಿಗೆ ನೇತಾರರು ವೃದ್ಧಿಸಿಕೊಂಡ ಸಂಪತ್ತಿನ ಮಟ್ಟ ಅರಿತುಕೊಳ್ಳುವ ಅವಕಾಶ ದೊರಕುವುದು ಚುನಾವಣೆಯ ಸಮಯದಲ್ಲಿ ಮಾತ್ರ. ತಾನೊಬ್ಬ ಸಾಮಾನ್ಯರಲ್ಲಿ ಶ್ರೀಸಾಮಾನ್ಯ ಎಂದು ಬೊಬ್ಬೆ ಹೊಡೆಯುವ ಮತ್ತು ಎಲ್ಲರೊಂದಿಗೆ ಬೆರೆತು ಬಾಳುವ ಬಡವನೆಂದೇ ಬಿಂಬಿಸಿಕೊಂಡು, ಕೆಲವೇ ವರ್ಷಗಳ ಹಿಂದಿನ ತನಕ ಅಷ್ಟೊಂದು ಸ್ಥಿತಿವಂತರಲ್ಲ ದವರೂ,ಸ್ಥಿತ್ಯಂತರಗೊಂಡು ನವಕೋಟಿ ಶ್ರೀಮನ್ನಾರಾಯಣ (Srimannarayana)ರಾಗಿ ಕಾಣಿಸಿಕೊಳ್ಳುವುದು ಆಗ ಮಾತ್ರ.
ಕೋಟಿಗಟ್ಟಲೆ ಆಸ್ತಿ, ಮಣಗಟ್ಟಲೆ ಚಿನ್ನ ,ಬೆಳ್ಳಿ, ಹತ್ತಾರು ಮನೆ ,ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಕೆಲವು ರಾಜಕಾರಣಿಗಳ ಬಳಿ ತಿರುಗಾಡಲು ಸ್ವಂತದ್ದೊಂದು ವಾಹನವೇ ಇಲ್ಲವೆಂಬ ದಾಖಲೆಯನ್ನು ಇಲ್ಲಿ ಒದಗಿಸಲಾಗುತ್ತದೆ! ಅದೇ ಸೋಜಿಗ. ಜನಸೇವೆಯಲ್ಲಿ ಮುಳುಗಿ ಬಿಟ್ಟಿರುವವರಿಗೆ ಸ್ವಂತದ್ದೊಂದು ವಾಹನ ತೆಗೆದುಕೊಳ್ಳಲು ಸಮಯವೆಲ್ಲಿರಬೇಕೆನ್ನಿ?
ಅಥವಾ ಅವರ ಜನಸೇವೆಗೆ ಮಾರುಹೋಗಿ ಭಕ್ತಗಣಗಳಲ್ಲೊಬ್ಬರು ತಮ್ಮ ನಾಯಕರ ತಿರುಗಾಟಕ್ಕೆಂದು ಸುಸಜ್ಜಿತ ವಾಹನದ ಊರಗ ಹೊರೆಕಾಣಿಕೆ ಕೊಟ್ಟಿರಲೂಬಹುದೆನ್ನೆ! ಒಟ್ಟಾರೆ ಪ್ರಜಾಪ್ರಭುತ್ವ (Democracy)ವೆಂಬುದು ಜನರಿಂದಲೇ, ಜನರಿಗಾಗಿ, ಜನರೇ ಎಳೆಯುವ ತೇರು, ತೇರು ಏರಿ ಕುಳಿತವರದ್ದು ಬರೋಬ್ಬರಿ ಕಾರುಬಾರು! ಜನ ಸೇವೆಗಿಳಿಯುವ ಮುಂಚೆ ಜನಸಾಮಾನ್ಯರಾಗಿದ್ದಂತಹ ಬಹುತೇಕ ರಾಜಕಾರಣಿಗಳನ್ನು ಕೆಲವೇ ವರ್ಷಗಳಲ್ಲಿ ಬಹುದೊಡ್ಡ ಕೃಷಿಕರು, ಉದ್ಯೋಗಪತಿಗಳನ್ನಾಗಿ ರಾಜಕೀಯೋದ್ಯಮದ ಚಮತ್ಕಾರ ನಿಬ್ಬೆರಗಾಗಿಸುವುದಂತೂ ನಿಜ.
ಶ್ರೀಮಂತರೆಂದು ಗುರುತಿಸಿಕೊಂಡರೆ ಜನಸಾಮಾನ್ಯರ ಬೆಂಬಲ ಸಿಗಲಿಕ್ಕಿಲ್ಲವೆಂಬಂತಿದ್ದ ಚಿತ್ರಣ ಮುಂಚಿನದು. ಇತ್ತೀಚೆಗೆ ಶ್ರೀಮಂತರಲ್ಲದವರು ರಾಜಕಾರಣಕ್ಕೆ ಸಲ್ಲದವರು ಎಂಬ ನಿರೀಕ್ಷೆ ನಾಗರೀಕ ಸಮಾಜದಲ್ಲೂ ಕಾಣುತ್ತಿರುವುದು ವಿಪರ್ಯಾಸ. ಸಮಾಜದ ನಿರೀಕ್ಷೆಗಳೂ ಭ್ರಷ್ಟತೆಯನ್ನೇ ಬಯಸುತ್ತಿರುವುದು #Politics ಇಂದಿನ ದುರಂತ. ಹೀಗಿರುವಾಗ ಜನಸೇವೆಗೆ ಧುಮುಕಿದ ರಾಜಕೀಯೋದ್ಯಮಿಗಳನ್ನು ಮಾತ್ರ ಭ್ರಷ್ಟರೆಂದು ಬಿಂಬಿಸುವುದು ಕೂಡ ಸಮಂಜಸವಲ್ಲ.ಭ್ರಷ್ಟತೆ ಎಂದಾಕ್ಷಣ ನಮಗೆ ನೆನಪಾಗುವುದು ಲಂಚಕೋರತನ.

ಲಂಚಕೋರತನ ಭ್ರಷ್ಟತೆಯ (Corruption) ಒಂದು ಸಣ್ಣ ಭಾಗ ಮಾತ್ರ ಲಂಚವನ್ನು ಕಿರುಬೆರಳಿಗೂ ಸೋಕಿಸದ ಹಲವು ನಾಯಕರು ನಮ್ಮ ನಡುವಿದ್ದಾರೆ. ಅವರೆಲ್ಲರೂ ಪ್ರಾಮಾಣಿಕರಂತೆ ಕಂಡರೂ ಭ್ರಷ್ಟರಲ್ಲವೆಂದು ಹೇಳಲಾಗುವುದಿಲ್ಲ. ಬಹುತೇಕರು ತಮಗಿರುವ ಗೌಪ್ಯ ಮಾಹಿತಿಗಳು, ಅಧಿಕಾರ, ಸ್ಥಾನದ ಬಲದಲ್ಲಿ ಸಿಗಬಲ್ಲ ಸೌಕರ್ಯಗಳ ಬಳಕೆ/ದುರ್ಬಳಕೆಯ ಮೂಲಕವೂ ತಮ್ಮ ಬಲವೃದ್ದಿಗೆ ಮುಂದಾಗುವುದು ಸಾಮಾನ್ಯ.
ಇಂತಹ ಸನ್ನಿವೇಶಗಳಲ್ಲಿ ಬಳಕೆ ಮತ್ತು ದುರ್ಬಳಕೆಯ ನಡುವೆ ನೂಲೆಳೆಯಷ್ಟೇ ಅಂತರ ಕಾಣಿಸುವುದು ಮಾತ್ರ ಸುಳ್ಳಲ್ಲ! ಭಾರತದ ಬಹುತೇಕ ಶ್ರೀಮಂತ ರಾಜಕಾರಣಿಗಳ ಐಶ್ವರ್ಯದ ಮೂಲ ಕೃಷಿ, ವ್ಯಾಪಾರ, ಉದ್ಯಮ. ಚುನಾವಣೆಯಿಂದ- ಚುನಾವಣೆಗೆ ಆಸ್ತಿ ಮಟ್ಟದ ಏರಿಕೆಗೆ ತಂತಮ್ಮ ಕುಟುಂಬದ ಒಡೆತನದ ಭೂಮಿಯ ಮೌಲ್ಯ ವೃದ್ಧಿಯೇ ಕಾರಣವೆಂಬ ಸಮಜಾಯಿಷಿ ಹಲವರು ಕೊಡುವುದು. ಅದು ನಿಜವೂ ಕೂಡ.
ಆದರೆ ಕೆಲವೊಮ್ಮೆ ಅಂತಹ ಆಸ್ತಿ ಖರೀದಿಸುವ ಮುಂಚೆ ಆ ಪ್ರದೇಶದಲ್ಲಿ ಸರಕಾರ ಅಥವಾ ಖಾಸಗಿಯವರ ನೇತೃತ್ವದ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ಮುಂಚಿತ ಖಚಿತ ಮಾಹಿತಿ ಅವರಿಗಿರುವುದು ಕೂಡ ಒಂದು ಕಾರಣ. ಇಂತಹ ಮಾಹಿತಿ ಜನಸಾಮಾನ್ಯರಿಗೆ ತಲುಪುವ ಹೊತ್ತಿಗೆ ಅಂತಹ ಹೂಡಿಕೆಗಳು, ಜನಸಾಮಾನ್ಯರ ಪಾಲಿಗೆ ನಿಲುಕದ ನಕ್ಷತ್ರಗಳಾಗಿ ಹೊರಹೊಮ್ಮಿಯಾಗಿರುತ್ತದೆ.
ಜನಸೇವೆಗೆ ತಮ್ಮ ಬಾಳನ್ನೇ ಮುಡಿಪಾಗಿಡುವ ಇಂತ ಇಂತಹ ಹಲವು ನಾಯಕರು ತಮ್ಮ ಅಧಿಕಾರ, ಸ್ಥಾನಬಲದ ಕಾರಣ ದೊರಕುವ ಮಾಹಿತಿಯ ದುರುಪಯೋಗ ಮಾಡಿಕೊಂಡು ಲಾಭ ಮಾಡಿಕೊಳ್ಳಬಾರದೆಂಬ ನಿಯಮಗಳು ಕಾಲ-ಕಾಲಕ್ಕೆ ರೂಪುಗೊಂಡರೂ, ಅವುಗಳೇನೂ ಪರಿಣಾಮಕಾರಿಯಾಗಿಲ್ಲ. ಕೆಲವೊಮ್ಮೆ ಅಂತಹ ನಿಯಮಗಳ ಜಾರಿಗೊಳಿಸಲು ಕುಂದುಕೊರತೆ ಕಂಡು ಬಂದರೆ, ಇನ್ನಷ್ಟು ಸಮಯದಲ್ಲಿ ಜಾರಿಯಾದರೂ ಉಲ್ಬಣವಾಗದಂತೆ ನುಣುಚಿಕೊಳ್ಳುವ ಮಾರ್ಗೋಪಾಯಗಳ ಬಳಕೆಯಾಗಿರುತ್ತದೆ.
ತನು, ಮನ ಅರ್ಪಿಸಿ ಜನಸೇವೆಗೆ ಹಗಲಿರುಳು ದುಡಿಯುವ ರಾಜಕೀಯ ನೇತಾರರು ತಮ್ಮ ಧನ, ಐಶ್ವರ್ಯ ವೃದ್ಧಿಯ ಮಾರ್ಗೋಪಾಯವನ್ನು ತಮ್ಮ ಅನುಯಾಯಿಗಳಿಗೆ ಅಥವಾ ತಮ್ಮ ಕ್ಷೇತ್ರದ ಮತದಾರ ಪ್ರಭುಗಳಿಗೆ ಒಂದಂಶದಷ್ಟಾದರೂ ಕಲಿಸಿಕೊಟ್ಟರೆ,ಬಡತನ ನಿರ್ಮೂಲನೆ ಎಂಬುದು ಕನಸಾಗಿ ಉಳಿಯಲಿಕ್ಕಿಲ್ಲವೇನೋ ಅಲ್ವಾ?….
ಅಂಕಣ: ವಿಶ್ವರೂಪ
ಅಂಕಣಕಾರ: ವೀರಾಜ್ ಸ್ವಾಮಿ