ನವದೆಹಲಿ, ಆ. 12: ವಿಪಕ್ಷ ನಾಯಕರು ಮಹಿಳಾ ಮಾರ್ಷಲ್ ಗಳ ಮೇಲೆ ದಾಳಿ ನಡೆಸಿದ್ದಾರೆ ಜೊತೆಗೆ ರಾಜ್ಯ ಸಭಾ ಸ್ಪೀಕರ್ ಮೇಲೆ ರೂಲ್ ಬುಕ್ ಎಸೆದಿದ್ದು ಮತ್ತು ಟೇಬಲ್ ಮೇಲೆ ಹತ್ತಿ ಅನುಚಿತವಾಗಿ ಪ್ರತಿಭಟನೆ ಮಾಡಿರುವುದಕ್ಕಾಗಿ ವಿಪಕ್ಷಗಳು ಕ್ಷಮೆ ಕೇಳಬೇಕೆಂದು ಬಿಜೆಪಿ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಗೊಷ್ಟಿಯಲ್ಲಿ ಮಾತನಾಡಿದ ಪ್ರಹ್ಲಾದ ಜೋಷಿ ವಿಪಕ್ಷದವರು ಬಾಗಿಲು ಮುರಿಯುವ ಪ್ರಯತ್ನ ನಡೆಸಿದರು ಮತ್ತು ಮಹಿಳಾ ಮಾರ್ಷಲ್ ಗಳ ಮೇಲೆ ಹಲ್ಲೆ ನಡೆಸಿದರು ಜೊತೆಗೆ ಒಬಿಸಿ ಮಸೂದೆಯ ನಂತರ ನೀವು ಯಾವುದೇ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಿದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಸಂಸದರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ನಂತರ ಮಾತನಾಡಿದ ಅನುರಾಗ್ ಠಾಕೂರ್ ವಿಪಕ್ಷಗಳು ಮೊದಲ ದಿನದಂದಲೂ ಅಧಿವೇಶನ ನಡೆಸಲು ಅಡ್ಡಿ ಪಡಿಸುತ್ತಿದ್ದವು ಎಂದು ಆರೋಪಿಸಿದರು.
ಈ ಗಲಭೆಗಳ ಬಗ್ಗೆ ಪ್ರತಿಕ್ರಿಯಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮುಂಗಾರು ಅಧಿವೇಶನದಲ್ಲಿ ಸದನದ ಕಲಾಪಗಳು ಸುಗಮವಾಗಿ ನಡೆಯಲಿಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮಾತನಾಡಿ ವಿಪಕ್ಷಗಳು ಸದನದ ಪಾವಿತ್ರ್ಯತೆಯನ್ನು ಹಾಳು ಮಾಡಿವೆ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು.