ಹರಿಹರ, ಫೆ. 10: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಬಿಜೆಪಿ ಅವರು ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಹರಿಹರದ ರಾಜನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಕಾಯ್ದೆಗೆ ನಮ್ಮ ವಿರೋಧವಿದ್ದು, ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮಾತನಾಡಲೂ ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದರು.
ಕಾಯ್ದೆ ಜಾರಿಗೊಳಿಸುವ ವಿಷಯದಲ್ಲಿ ಅಧಿಕಾರದ ದುರುಪಯೋಗ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಧ್ವನಿ ಮತದಿಂದ ಗೋಹತ್ಯೆ ಕಾಯ್ದೆ ಜಾರಿಗೆ ತಂದಿದ್ದಾರೆ. ಆ ಮೂಲಕ
ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಸರ್ಕಾರವಿದೆ ಎಂಬ ಕಾರಣಕ್ಕೆ ಬಿಜೆಪಿ ಅವರು ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯನ್ನು ಖಂಡಿಸುತ್ತೇವೆ ಎಂದರು.
ಇದೇ ವೇಳೆ ಬೆಳಗಾವಿಯ ಲೋಕಸಭೆ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆ ಮೂರು ಜನರ ಹೆಸರು ವರಿಷ್ಠರಿಗೆ ಶಿಫಾರಸ್ದು ಮಾಡಿದ್ದೇವೆ. ಯಾರ ಹೆಸರನ್ನೂ ಅತಿ ಹೆಚ್ಚಾಗಿ ಕಾರ್ಯಕರ್ತರು ಹೇಳುತ್ತಾರೋ ಅವರಿಗೆ ಟಿಕೆಟ್ ಸಿಗಲಿದೆ. ನಾವು ಯಾರೊಬ್ಬರ ಪರವಾಗಿ ಇಲ್ಲ ಎಂದು ತಿಳಿಸಿದರು.