ಚಿಕ್ಕಮಗಳೂರು, ಜ. 08: ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆಯೇ ಬೀಳುತ್ತಾರೆ, ನನ್ನ ರಕ್ಷಣೆಗೆ ಜನರೇ ಬರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೌಳ ಹಿರಿಯೂರಿನಲ್ಲಿ ಆಯೋಜಿಸಿದ್ದ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಹಳ್ಳಿಯಿಂದ ಬಂದವನು, ಮಾತು ಸ್ವಲ್ಪ ಒರಟು, ಹಳ್ಳಿಭಾಷೆಯಲ್ಲಿ ಮಾತಾಡ್ತೇನೆ. ಇತ್ತೀಚೆಗೆ ನಾನು ಮಾತಾಡಿದ್ದೆಲ್ಲವನ್ನೂ ವಿವಾದ ಮಾಡುವುದು ಚಾಳಿಯಾಗಿಬಿಟ್ಟಿದೆ. ನಾ ಒಬ್ನೇ ಸಿಕ್ಕವನು ಟೀಕೆ ಮಾಡೋಕೆ, ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆಯೇ ಬೀಳುವವರು, ನನ್ನ ರಕ್ಷಣೆಗೆ ಜನರೇ ಬರಬೇಕು.
ದನದ ಮಾಂಸ ತಿನ್ಬೇಕೆಂದರೆ ತಿನ್ತೀನಿ, ನೀ ಯಾವನಯ್ಯಾ ಕೇಳೋಕೆ ಎಂದು ಕೇಳಿದ್ದು ನಿಜ. ನಾನು ಈ ವರೆಗೆ ದನದ ಮಾಂಸ ತಿಂದಿಲ್ಲ, ತಿನ್ನುವುದೂ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆಯ ಹಿಂದಿನ ಬಿಜೆಪಿಯ ಆತ್ಮವಂಚಕ ನಡವಳಿಕೆಯನ್ನು ಪ್ರಶ್ನಿಸಲು ಆ ರೀತಿ ಹೇಳಿದ್ದೆ. ಇದರಲ್ಲೇನಿದೆ ವಿವಾದ?
ಓಟು ಹಾಕಲು ಊರಿಗೆ ಹೋಗಿದ್ದಾಗ ಕಾರ್ಯಕರ್ತರ ಮನೆಗೆ ಊಟಕ್ಕೆ ಹೋಗಿದ್ದೆ. ಅಲ್ಲಿ ಕೋಳಿ ಮಾಡಿದ್ದರು. ನಮ್ಮೂರ ಯುವಕನೊಬ್ಬ ಇಂದು ಹನುಮಜಯಂತಿ ಮಾಂಸ ತಿನ್ನೋದಿಲ್ಲ ಎಂದು ಹೇಳಿದಾಗ, ಹನುಮ ಜಯಂತಿ ದಿನ ಕೆಲವು ಕಡೆ ಮರಿ ಹೊಡೆಯುತ್ತಾರೆ, ಮಾಂಸ ತಿಂದರೆ ತಪ್ಪೇನು ಎಂದು ಕೇಳಿದ್ದೆ. ಅದನ್ನೂ ಕೂಡಾ ವಿವಾದ ಮಾಡಿಬಿಟ್ಟರು ಎಂದು ಹೇಳಿದರು.