ಬೆಂಗಳೂರು ಸೆ 8 : ಸುಪಾರಿ ಕಿಲ್ಲರ್, ನಟೋರಿಯಸ್ ಡಾನ್ ಬಾಂಬೆ ರವಿ ಕೊರೊನಾದಿಂದಾಗಿ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಬಾಂಬೆ ರವಿ ಕುಖ್ಯಾತಿಯನ್ನು ಪಡೆದುಕೊಂಡಿದ್ದ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಿರ್ಮಾಪಕ ಉಮಾಪತಿ ಹಾಗೂ ದೀಪಕ್ ಎಂಬವರಿಗೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ, ಅಲ್ಲದೇ ಕೊಲೆ ಮಾಡುವುದಾಗಿಯೂ ಬೆದರಿಕೆಯನ್ನು ಕೂಡ ಹಾಕಿದ್ದ. ದಕ್ಷಿಣ ಆಫ್ರಿಕಾದ ಸಂಖ್ಯೆಯ ಮೂಲಕ ಡಾನ್ ಬಾಂಬೆ ರವಿ ಹಲವರಿಗೆ ಬೆದರಿಕೆಯನ್ನೊಡ್ಡಿದ್ದು, ಹಣಕ್ಕಾಗಿ ಪೀಡಿಸುತ್ತಿದ್ದ.
ಈ ಹಿಂದೆ ನಿರ್ಮಾಪಕ ಉಮಾಪತಿ ಅವರು ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಾಂಬೆ ರವಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರು. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಬಳಿಕ ನಿರ್ಮಾಪಕ ಉಮಾಪತಿ ಬಳಿಯಲ್ಲಿ ನನ್ನಿಂದ ತಪ್ಪಾಗಿದೆ, ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಮೂಲಕ ಕ್ಷಮೆ ಕೇಳಿದ್ದಾನೆ. ನನ್ನನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತಾ ರವಿ ಹೇಳಿದ್ದಾನೆ ಎನ್ನಲಾಗುತ್ತಿದೆ. ಇದೀಗ ಕೊರೊನಾ ವೈರಸ್ನಿಂದ ಬಳಲುತ್ತಿದ್ದ ಡಾನ್ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಈ ಸಂಬಂಧ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.