ರಾಯಚೂರು ಜ. 26: ಗಣರಾಜ್ಯೋತ್ಸವದ ದಿನವೇ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೆಡ್ಕರ್ ಅವರಿಗೆ ಅವಮಾನ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರವೇ ಧ್ವಜಾರೋಹಣ ನೆರವೇರಿಸುತ್ತೇನೆಂದು ಪಟ್ಟು ಹಿಡಿದು ಅಂಬೇಡ್ಕರ್ ಫೋಟೋ ತೆಗೆಸಿರುವ ಹಿನ್ನೆಲೆಯಲ್ಲಿ ದಲಿತ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಒಟ್ಟಿಗೆ ಇಟ್ಟು ಹೂ ಮಾಲೆ ಹಾಕಿ, ಪೂಜೆ ಮಾಡಿ ಪುಷ್ಪಾರ್ಚನೆ ಮತ್ತು ಧ್ವಜಾರೋಹಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಇಡಬೇಕೆಂದು ಯಾವುದೇ ಸೂಚನೆ, ಆದೇಶವಿಲ್ಲ. ಹೀಗಾಗಿ ಅಂಬೇಡ್ಕರ್ ಫೋಟೋ ತೆಗೆಯಬೇಕು ಎಂದು ಪಟ್ಟು ಹಿಡಿದರು.
ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ್ ಫೋಟೋ ತೆಗೆಯಲು ಮುಂದಾದರು.ರಾಯಚೂರು ಜಿಲ್ಲಾ ನ್ಯಾಯಾಲಯದ ಗಣರಾಜ್ಯೋತ್ಸವ ಸಂದರ್ಭ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿವೆ. ನನಗೆ ಯಾರ ಬಗ್ಗೆಯೂ ರಾಗ, ದ್ವೇಷಗಳಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಮಹಾತ್ಮ ಗಾಂಧೀಜಿ ಅವರ ಪೋಟೋ ಮಾತ್ರ ಇಟ್ಟುಕೊಂಡು ಬಂದಿದ್ದೇವೆ. ಅಂಬೇಡ್ಕರ್ ಪೋಟೋ ಇಡುವ ಬಗ್ಗೆ ಹೈ ಕೋರ್ಟ್ SoPಯಲ್ಲಿ ಉಲ್ಲೇಖ ಇಲ್ಲದ ಕಾರಣ ನಾನು ತೆಗೆಯುವಂತೆ ಕೇಳಿ ಕೊಂಡಿದ್ದೇನೆ ಎಂದು ನ್ಯಾಯಾಧೀಶರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿಯೂ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ. ನ್ಯಾಯಾಲಯದ ಸರ್ಕ್ಯೂಲರ್ ಪ್ರಕಾರ ಅಂಬೇಡ್ಕರ್ ಭಾವಚಿತ್ರ ಇಡುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ನನ್ನ ಗಮನಕ್ಕೆ ತರದೆ ಭಾವಚಿತ್ರ ತಂದು ಇಡಲಾಗಿತ್ತು. ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇಡುವುದಕ್ಕೆ ಮಾತ್ರ ಅವಕಾಶ ಇದೆ. ಹಾಗಾಗಿ ನಾನು ಪೋಟೋ ತೆರವು ಮಾಡುವಂತೆ ಹೇಳಿದೆ ಎನ್ನುವುದು ನ್ಯಾಯಾಧೀಶರ ಸಮರ್ಥನೆ. ರಾಜ್ಯದ ಹಲವು ಕಡೆ ಪ್ರತಿಭಟನೆಗೆ ಇಳಿದಿರುವ ದಲಿತಪರ ಸಂಘಟನೆಗಳು ಇದು ಅಕ್ಷಮ್ಯ ಅಪರಾಧ, ತಕ್ಷಣ ನ್ಯಾಯಾಧೀಶರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಧೀಶರು ಸಂವಿಧಾನವನ್ನು, ಶಿಷ್ಟಾಚಾರವನ್ನು ಪಾಲನೆ ಮಾಡಿ ಇತರರಿಗೆ ಮಾದರಿಯಾಗಬೇಕು. ಆದರೆ ಇಂಥ ಹೆಜ್ಜೆ ಇಟ್ಟು ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಲಾಗಿದೆ ಎಂದು ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ಆದರೆ ದಲಿತ ಸಂಘಟನೆಗಳ ಪ್ರಕಾರ ರಾಜ್ಯ ಸರ್ಕಾರ 2020ರಲ್ಲೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೆಡ್ಕರ್ ಫೋಟೋ ಇಡುವಂತೆ ಸುತ್ತೋಲೆ ಹೊರಡಿಸಿತ್ತು. ಆದರೆ ನ್ಯಾಯಾಧೀಶರು ಅದನ್ನು ಪರಿಗಣಿಸದೇ ಅಂಬೆಡ್ಕರ್ ಫೋಟೋವನ್ನು ತೆಗೆಸಿ ಅವರಿಗೆ ಅವಮಾನ ಮಾಡಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾಯಾಧೀಶರ ವರ್ತನೆ ಖಂಡಿಸಿ ಪ್ರತಿಭಟನೆ :

ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಅಂಬೇಡ್ಕರ್ ಅವರ ಭಾವಚಿತ್ರ ಪೂಜೆಗೆ ನಿರಾಕರಿಸಿ ಆ ಫೋಟೋ ತೆರವು ಮಾಡಿಸಿದ್ದಾರೆ ಮತ್ತು ಆ ವೇಳೆ ದಲಿತ ವಕೀಲರು ನ್ಯಾಯಾಧೀಶರ ಕ್ರಮವನ್ನು ಪ್ರಶ್ನಿಸಿ ಸಮಾರಂಭ ಬಹಿಷ್ಕರಿಸಿ ಹೊರನಡೆದರು ಎನ್ನಲಾದ ವೀಡಿಯೋ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ರಾಯಚೂರಿನಲ್ಲಿ ಘಟನೆಯನ್ನು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಏನೇ ಆದರೂ ಭಾರತಕ್ಕೆ ಒಂದು ಶ್ರೇಷ್ಟವಾದ ಸಂವಿಧಾನ ತಂದುಕೊಟ್ಟ ಅಂಬೆಡ್ಕರ್ ಅವರಿಗೆ ಗಣರಾಜ್ಯೋತ್ಸವ ದಿನದಂದೇ ಅವಮಾನವಾಗಿರುವುದು ಖಂಡನೀಯವಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.