ಬೆಂಗಳೂರು, ಜ. 27: ಸಬ್ ರಿಜಿಸ್ಟ್ರಾರ್ ಬಳಿ ಹಣಕ್ಕಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಒಳಗಾಗಿರುವ ಸಚಿವ ಆರ್. ಅಶೋಕ್ ಆಪ್ತ ಸಹಾಯಕ ಗಂಗಾಧರ್ ಅವರನ್ನು ಗೇಟ್ ಪಾಸ್ ಮಾಡಲಾಗಿದೆ. ಅವರು ಕರ್ನಾಟಕ ವಿಧಾನಸಭಾ ಸಚಿವಾಲಯದ ನೌಕರ ಎಂದು ತಿಳಿದು ಬಂದಿದೆ.
ಅಶೋಕ್ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗಂಗಾಧರ್ ಅವರು ಪರಿಚಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಆರ್. ಅಶೋಕ್ ಸಚಿವರಾದ ಮೇಲೆ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಾಖೆಯಲ್ಲಿ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಮೊದಲು ಸಚಿವಾಲಯದ ಕಾರು ಚಾಲಕರಾಗಿ ನೇಮಕಗೊಂಡಿದ್ದರು. ಅನಂತರ ಶಾಖಾಧಿಕಾರಿ ಹುದ್ದೆಗೆ ಭಡ್ತಿ ಪಡೆದುಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ಕರ್ನಾಟಕ ವಿಧಾನಸಭೆ ಸಚಿವಾಲಯದ ಹಲವು ಅಧಿಕಾರಿ, ನೌಕರರು ಮುಖ್ಯಮಂತ್ರಿಗಳ ಕಚೇರ, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳ ಕಚೇರಿಗೆ ನಿಯೋಜನೆ ಮೇಲೆ ತೆರಳಿದ್ದಾರೆ. ಹೀಗಾಗಿ ವಿಧಾನಸಭೆ ಸಚಿವಾಲಯದ ಆಡಳಿತ ಶಾಖೆಯೂ ಸೇರಿದಂತೆ ವಿವಿಧ ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಸಣುತ್ತಿದೆ. ನಿಯೋಜನೆ ಮೇಲೆ ತೆರಳಲು ವಿಧಾನಸಭೆ ಸ್ಪೀಕರ್ ಕಾಗೇರಿ ಅವರು ಯಾವುದೇ ತಕರಾರು ತೆಗೆಯದೇ ಅನುಮತಿ ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣದ ಹಿನ್ನಲೆ ಏನು?
ಪ್ರಕರಣದ ಹಿನ್ನಲೆಯನ್ನು ಗಮನಿಸುವುದಾದರೆ, ಶೃಂಗೇರಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ಅವರು ಬಾಗವಹಿಸಿದ್ದರು. 2021ರ ಜನವರಿ 21ರಂದು ಕಂದಾಯ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಉಪನೋಂದಣಾಧಿಕಾರಿ ಎಚ್. ಎಸ್ ಚೆಲುವರಾಜು ಅವರ ಖಾಸಗಿ ಮೊಬೈಲ್ ಸಂಖ್ಯೆ 974111815ಗೆ ಸಂದೇಶ ಕಳುಹಿಸಲಾಗಿತ್ತು. ಆದರೆ ಸಂದೇಶ ಕಳಿಸಿದವರ ಪರಿಚಯ ಇವರಿಗಿರಲಿಲ್ಲ. ಈ ಘಟನೆಯಾಗಿ ೩ ದಿನಗಳ ಬಳಿಕ ಅಂದರೆ ೨೦೨೧ರ ಜನವರಿ 24ರಂದು ಸಚಿವ ಆರ್. ಅಶೋಕ್ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್ ಎಂಬ ವ್ಯಕ್ತಿಯು ತಮ್ಮನ್ನು ಮತ್ತು ಸಚಿವ ಅಶೋಕ್ರವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರು ಎಂಬುದಾಗಿ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ 2021ರ ಜನವರಿ 24ರಂದು ಸಚಿವ ಆರ್ ಅಶೋಕ್ ಅವರನ್ನು ಭೇಟಿಯಾಗಲು ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಗಂಗಾಧರ್ ಎಂಬಾತ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ದೂರಿದ್ದಾರೆ. ಈವರೆಗೆ ನಾನು ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ನನಗಿಲ್ಲ ಎಂದು ಸ್ಥಳದಲ್ಲಿಯೇ ತಿಳಿಸಿ, ಆತನ ಬೆಡಿಕೆಯನ್ನು ತಿರಸ್ಕರಿಸಿದ್ದೆ ಎಂದು ವಿವರಿಸಿದ್ದಾರೆ.
ಅದೇ ದಿನ ಗಂಗಾಧರ್ 8. 30ರ ಸಮಯದಲ್ಲಿ ತನ್ನ ಮೊಬೈಲ್ನಿಂದ ವಾಟ್ಸಾಪ್ ಧ್ವನಿ ಕರೆಯನ್ನು ಮಾಡಿದ್ದ ಎಂದು ದೂರಿನಲ್ಲಿ ಹೇಳಿರುವ ಚೆಲುವರಾಜು ಅವರು ಗಂಗಾಧರ್ ಎಂಬಾತ ಸರ್ಕಾರಿ ಅಧಿಕಾರಿಯನ್ನು ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಚೆಲುವರಾಜು ಆರೋಪಿಸಿದ್ದಾರೆ.